ತಾವು ಗೆದ್ದ ನಂತರ ಕೇಂದ್ರ ಸರ್ಕಾರದಿಂದ 10 ಸಾವಿರ ಮನೆ ಮಂಜೂರು ಮಾಡಿಸಿಕೊಂಡು ಬರುತ್ತೇನೆ ಎಂದು ಭರವಸೆ

ಗಂಗಾವತಿ: ಸಚಿವ ಶಿವರಾಜ ತಂಗಡಗಿ ಅವರು ಜಿಲ್ಲೆ ಸೇರಿದಂತೆ ಗಂಗಾವತಿ ತಾಲೂಕಿನಲ್ಲಿ ಸಿಪಾಯಿಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ಮಾಡುವ ದಂಧೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಇಕ್ಬಾಲ್‌ ಅನ್ಸಾರಿ ಆರೋಪಿಸಿದ್ದಾರೆ.

ನಗರದಲ್ಲಿ ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಶಿವರಾಜ ತಂಗಡಗಿ ಸಚಿವರಾಗಿ ಇತಿಮಿತಿಯಲ್ಲಿರಬೇಕು ಆದರೆ ಅವರು ಗೆರೆ ದಾಟಿ ಮಾತನಾಡುತ್ತಿದ್ದಾರೆ. ನಾನು ತಂಗಡಗಿ ಕಾಂಗ್ರೆಸ್‌ ಪಕ್ಷದಲ್ಲಿದ್ದೇವೆ. ನಾನು ಸೋತಿರಬಹುದು, ಗೆದ್ದ ತಂಗಡಗಿ ಸಿಪಾಯಿಯಿಂದ ಹಿಡಿದು ಅಧಿಕಾರಿಗಳ ವರ್ಗಾವಣೆ ಮಾಡುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ ಎಂದರು.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸುಳ್ಳು ಹೇಳುವ ವ್ಯಕ್ತಿಯಾಗಿದ್ದಾರೆ. ತಾವು ಗೆದ್ದ ನಂತರ ಕೇಂದ್ರ ಸರ್ಕಾರದಿಂದ 10 ಸಾವಿರ ಮನೆ ಮಂಜೂರು ಮಾಡಿಸಿಕೊಂಡು ಬರುತ್ತೇನೆ ಎಂದು ಭರವಸೆ ನೀಡಿರುವುದು ಎಲ್ಲಿ ಹೋಯಿತು ಎಂದರು.

ತಮಗೆ ಭಗವಂತನ ಕೃಪೆ ಇದೆ ಎಂದು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ. ಜನಾರ್ದನರೆಡ್ಡಿ 35 ವರ್ಷಗಳ ಹಿಂದೆ ಎನೋಬಲ್‌ ಇಂಡಿಯಾ ಎನ್ನುವ ಫೈನಾನ್ಸ್ ಕಂಪನಿ ಮಾಡಿದ್ದರು. ಈ ಸಂದರ್ಭದಲ್ಲಿ ಜನರು ಬಹಳಷ್ಟು ಹಣ ಹಾಕಿ ಕಳೆದುಕೊಂಡಿದ್ದಾರೆ ಎಂದರು.

ಅಲ್ಲಾನ ಕೃಪೆಯಿಂದ ಮತ್ತೆ ಗಂಗಾವತಿಗೆ ಬಂದು ಜನರ ಮುಂದೆ ಹೋಗುತ್ತೇನೆ ಎಂದರು. ಈ ವೇಳೆ ಎಸ್.ಬಿ. ಖಾದ್ರಿ ಇದ್ದರು.