ಸಾರಾಂಶ
ಬಳ್ಳಾರಿ: ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಬೋರ್ಡ್ ಮೂಲಕ ಲ್ಯಾಂಡ್ ಜಿಹಾದ್ ಜಾರಿಗೆ ತಂದಿದ್ದಾರೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಸಿ.ಟಿ.ರವಿ ಆಪಾದಿಸಿದರು.
ಸಂವಿಧಾನದ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್, ಇಸ್ಲಾಮಿಕ್ ದೇಶದಲ್ಲೂ ಇಲ್ಲದ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದ್ದಾರೆ. ವಕ್ಫ್ ಕಾನೂನು ಬಳಸಿಕೊಂಡು ಲ್ಯಾಂಡ್ ಜಿಹಾದ್ ಮಾಡಲು ಕಾಂಗ್ರೆಸ್ ಕುಮ್ಮಕ್ಕು ನೀಡಿದೆ ಎಂದು ಪಕ್ಷದ ಕಚೇರಿಯಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ದೂರಿದರು.ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ವಕ್ಫ್ ಬೋರ್ಡ್ ಮಾಡುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ರಾಜಕೀಯ ಕೊನೆಗಾಲದಲ್ಲಾದರೂ ಸಿಎಂ ಸಿದ್ದರಾಮಯ್ಯ ಸತ್ಯದ ಪರ ನಿಲ್ಲಬೇಕು. ಸಂವಿಧಾನ ವಿರೋಧಿ ವಕ್ಫ್ ಕಾಯ್ದೆ ರದ್ದಾಗಬೇಕು ಎಂದು ಒತ್ತಾಯಿಸಿದರು.
ವಕ್ಫ್ ಬೋರ್ಡ್ನ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಿದೆ. ಈ ಸಂಬಂಧ ಡ್ರಾಫ್ಟ್ ಸಿದ್ಧಪಡಿಸಲಾಗಿದ್ದು ಜಂಟಿ ಸಮಿತಿಯ ಮುಂದಿದೆ. ದೇಶಕ್ಕೆ ಬೇಕಾಗಿರುವುದು ಸಂವಿಧಾನವೇ ಹೊರತು, ಶರಿಯಾ ಅಲ್ಲ ಎಂಬುದು ನಮ್ಮ ಪ್ರತಿಪಾದನೆಯಾಗಿದೆ ಎಂದರು.ಭ್ರಷ್ಟಾಚಾರದ ವಿಶ್ವಕಪ್ ಕಾಂಗ್ರೆಸ್ಗೆ:
ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ಮಿಸ್ಟರ್ ಕ್ಲೀನ್ ಸಿದ್ದರಾಮಯ್ಯ ಮಿಸ್ಟರ್ ಕರಪ್ಟ್ ಆಗಿ ಬದಲಾಗಿದ್ದಾರೆ. ಬೆಲೆ ಏರಿಕೆ, ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆಯಾಗಿದೆ. ಎಸ್ಟಿ ಸಮುದಾಯದ ಅಭಿವೃದ್ಧಿಯ ಮೀಸಲಾದ ಹಣವನ್ನು ಕಾಂಗ್ರೆಸ್ ಲೂಟಿ ಹೊಡೆದಿದೆ. ಜನರ ಹಣವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಿಕೊಂಡಿದೆ ಎಂದರು.ಕೋಟ್ಯಂತರ ಮೌಲ್ಯದ ಕಾರು ಖರೀದಿಸಲಾಗಿದೆ. ಮುಡಾದಲ್ಲಿ ಸಿಎಂ ಅವರೇ ಸ್ವಜನ ಪಕ್ಷಪಾತ ಮಾಡಿದ್ದಾರೆ. ಅಬಕಾರಿ, ಆಸ್ತಿ, ವಾಹನ ಖರೀದಿ, ನೋಂದಣಿ ಶುಲ್ಕ ಹೆಚ್ಚಳ, ಡೀಸೆಲ್, ಪೆಟ್ರೋಲ್ ಸೆಸ್ ಹೆಚ್ಚಳ ಮಾಡಲಾಗಿದೆ. ಗೃಹಬಳಕೆಯ ವಿದ್ಯುತ್ ದರವೂ ಏರಿಕೆಯಾಗಿದೆ. ರೈತರ ಪಹಣಿ ಬೆಲೆ ಏರಿಸಲಾಗಿದೆ. ಹಾಲಿನಿಂದ ಆಲ್ಕೋ ಹಾಲ್ ವರೆಗೆ ದುಬಾರಿಯಾಗಿದೆ. ಪಂಚ ಗ್ಯಾರಂಟಿಗಳು ಪಂಕ್ಟರ್ ಆಗಿದೆ. ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ಮುಳುಗಿದೆಯೆಂದರೆ ಭ್ರಷ್ಟಾಚಾರಕ್ಕೆ ವಿಶ್ವಕಪ್ ಇಷ್ಟರೆ, ಅದು ಕಾಂಗ್ರೆಸ್ಗೆ ಪಾಲಾಗುತ್ತದೆ ಎಂದು ಟೀಕಿಸಿದರು.
ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಕುರಿತು ಉಪ ಚುನಾವಣೆಯಲ್ಲಿ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದ್ದು, ಇದು ಮತದಾರರಿಗೂ ಗೊತ್ತಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮುಖಭಂಗವಾಗಲಿದೆ ಎಂದರು.ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ಕುಮಾರ ಮೋಕಾ, ಮುಖಂಡರಾದ ಮುರಹರಗೌಡ ಗೋನಾಳ್, ಎಚ್.ಹನುಮಂತಪ್ಪ, ಗುತ್ತಿಗನೂರು ವಿರೂಪಾಕ್ಷಗೌಡ, ಕೆ.ಎ.ರಾಮಲಿಂಗಪ್ಪ, ಡಾ.ಬಿ.ಕೆ.ಸುಂದರ್, ಗಣಪಾಲ್ ಐನಾಥ ರೆಡ್ಡಿ, ಎಸ್.ಗುರುಲಿಂಗನಗೌಡ, ಮಲ್ಲನಗೌಡ ಸುದ್ದಿಗೋಷ್ಠಿಯಲ್ಲಿದ್ದರು.