ಪಾಲಿಕೆಯಲ್ಲಿ ವಿವಿಧ ಯೋಜನೆಯಲ್ಲಿ ಅವ್ಯವಹಾರ

| Published : Sep 02 2025, 01:00 AM IST

ಸಾರಾಂಶ

ಬೀದರ್‌ ಮಹಾನಗರ ಪಾಲಿಕೆಯಲ್ಲಿ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸೋಮವಾರ ದಲಿತ ಸಂಘರ್ಷ ಸಮಿತಿಯಿಂದ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಬೀದರ್‌: ಬೀದರ್‌ ಮಹಾನಗರ ಪಾಲಿಕೆಯಲ್ಲಿ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸೋಮವಾರ ದಲಿತ ಸಂಘರ್ಷ ಸಮಿತಿಯಿಂದ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಡಿಎಸ್‌ಎಸ್‌ ವಿಭಾಗೀಯ ಸಂಚಾಲಕರಾದ ಉಮೇಶಕುಮಾರ ಸ್ವಾರಳ್ಳಿಕರ್‌ ನೇತೃತ್ವದಲ್ಲಿ ನಗರದ ಡಾ. ಅಂಬೇಡ್ಕರ್‌ ವೃತ್ತದಿಂದ ಮಹಾ ನಗರಪಾಲಿಕೆ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಸಲ್ಲಿಸಿ 15ನೇ ಹಣಕಾಸು ಮತ್ತು ಎಸ್ಎಫ್ಸಿ ಅನುದಾನದಲ್ಲಿ ಕೋಟ್ಯಂತರ ರು. ಅವ್ಯವಹಾರ ಆಗಿದ್ದು, ಅದರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ವಸತಿ ಯೋಜನೆಗಳಲ್ಲಿ ಅಕ್ರಮವಾಗಿ ಫಲಾನುಭವಿಗಳಿಂದ ಹಣ ಪಡೆದು ಆಯ್ಕೆಮಾಡಲಾಗುತ್ತದೆ. ಬಡವರ ಮನೆ ದುರಸ್ತಿಗಾಗಿ ಬಳಸುವ ಅನುದಾನವನ್ನು ಯಾರದೋ ಮನೆಯ ಮುಂದೆ ನಿಂತು ಭಾವಚಿತ್ರ ಲಗತ್ತಿಸಿ ಸಹಾಯ ಧನ ದಲ್ಲಾಳಿಗಳ ಮೂಲಕ ಲೂಟಿ ಮಾಡಲಾಗುತ್ತಿದೆ. ನಗರದ ಸ್ವಚ್ಛತೆ ಮಾಡುವ ಹೆಸರಿನಲ್ಲಿ ಕೋಟ್ಯಾಂತರ ರುಪಾಯಿಗಳ ಅನುದಾನವನ್ನು ಲೂಟಿ ಮಾಡಲಾಗುತ್ತಿದೆ. ರಸ್ತೆಗಳ ಮೇಲೆ ಕಸ ತುಂಬಿರುತ್ತದೆ ನಗರದಲ್ಲಿ ಒಳಚರಂಡಿ ಸ್ವಚ್ಛಗೊಳಿಸುತ್ತಿಲ್ಲ ಇದರಿಂದ ಚರಂಡಿಯ ನೀರು ರಸ್ತೆಯ ಮೇಲೆ ಬಂದು ಸಾರ್ವಜನಿಕರಿಗೆ ತುಂಬಾ ತೊಂದರೆ ಅನುಭವಿಸುತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಸ್ಡಿಪಿ ಅನುದಾನದಲ್ಲಿ ಕೂಲಿ ಕಾರ್ಮಿಕರಿಗೆ ಸಲಕರಣೆ ನೀಡದೆ ಸೌಲಭ್ಯ ನೀಡದೆ ಹಣವನ್ನು ನಕಲಿ ದಾಖಲೆ ಸೃಷ್ಠಿಸಿ ಲೂಟಿ ಮಾಡಿರುವ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಕೂಡ ಸಂಬಳ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್‌ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಜಿಲ್ಲಾ ಸಂಚಾಲಕರಾದ ಬಾಬುರಾವ್‌ ಕೌಠಾ, ಪ್ರಕಾಶ ಭಂಗಾರೆ, ಸಂದೀಪ ಕಟ್ಟಿಮನಿ, ಜೈ ಭೀಮ ಶರ್ಮಾ, ಗೋವಿಂದ ಬಡಿಗೇರ, ಕಲ್ಲಪ್ಪ ಚಾಂಬೋಳಕರ, ವಿಜಯ ಸಮ್ರಾಟ, ಅಶೋಕ ಸಂಗಮ, ದಿನೇಶ ಶಿಂಧೆ ಸೇರಿದಂತೆ ಇನ್ನಿತರರು ಇದ್ದರು. ಮಹಾನಗರ ಪಾಲಿಕೆಯ ಕಚೇರಿಯ ಬೀಗ ಮುಚ್ಚಿಸಿ ಪೊಲೀಸರಿಂದ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.