ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯಲ್ಲಿರುವ 24x7 ನೀರು ಸರಬರಾಜು ಪೈಪ್ಲೈನ್ ದುರಸ್ತಿ ಕುರಿತು ಶನಿವಾರ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಪ್ರಸಾದ ಅಬ್ಬಯ್ಯ ಅವರು ಅಧಿಕಾರಿಗಳೊಂದಿಗೆ ಭಾನುವಾರ ಕಾಮಗಾರಿ ನಡೆಯುವ ಸ್ಥಳ ಪರಿಶೀಲನೆ ಕೈಗೊಂಡರು.
ಈ ವೇಳೆ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಇಂಡಿಪಂಪ್ ವೃತ್ತದಿಂದ ಕಾರವಾರ ರಸ್ತೆ ಭಾಗದ 550 ಮೀಟರ್ ಉದ್ದದ ಪೈಪ್ಲೈನ್ ಹಾಳಾಗಿ ಪದೇ ಪದೇ ತೊಂದರೆಯಾಗುತ್ತಿದೆ. ಇದನ್ನು ಬದಲಾಯಿಸುವಂತೆ ಈ ಭಾಗದ ಜನರ ಮನವಿ ಮಾಡಿದ್ದರು. ಈ ರಸ್ತೆ ನಿರ್ಮಾಣ ಮಾಡುವ ಪೂರ್ವದಲ್ಲಿಯೇ ಎಲ್ಆ್ಯಂಡ್ಟಿ ಅಧಿಕಾರಿಗಳಿಗೆ ಈ ಪೈಪ್ಲೈನ್ ಬದಲಾಯಿಸುವಂತೆ ಸೂಚಿಸಲಾಗಿತ್ತು. ಆದರೆ, ಬದಲಾಯಿಸಿರಲಿಲ್ಲ. ಈಗ ಇಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈಗ ಪೈಪ್ಲೈನ್ ಬದಲಾವಣೆ ಮಾಡುವ ಅನಿವಾರ್ಯತೆ ಬಂದಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ರಸ್ತೆ ಹಾಳಾಗದಂತೆ ಪೈಪ್ಲೈನ್ ಬದಲಾಯಿಸುವ ಕುರಿತು ಚರ್ಚಿಸಲು ಪಾಲಿಕೆ ಆಯುಕ್ತರು, ಮೇಯರ್, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಚರ್ಚಿಸಲಾಗಿದೆ. ಸುಮಾರು 3 ಅಡಿ ಅಗಲದ ಟ್ರಂಚ್ ಮಾಡಿ ಹಳೆಯ ಪೈಪ್ಲೈನ್ ತೆಗೆದು ಹೊಸ ಪೈಪ್ಲೈನ್ ಅಳವಡಿಸಲು ಸೂಚಿಸಲಾಗಿದೆ. ಈ ಕಾಮಗಾರಿ ಆರಂಭಿಸುವುದರಿಂದ ವಾಹನ ಸಂಚಾರಕ್ಕೆ ಅಲ್ಪ ಪ್ರಮಾಣದ ತೊಂದರೆಯಾಗಲಿದೆ. ಒಂದು ಮಾರ್ಗ ಬಂದ್ ಮಾಡಿ ಮತ್ತೊಂದು ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಕಾಮಗಾರಿ ಪ್ರಾರಂಭಿಸಿ ಆದಷ್ಟು ಬೇಗನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಆದಷ್ಟು ಬೇಗನೇ ಕಾಮಗಾರಿ ಕೈಗೊಂಡು ಪೈಪ್ಲೈನ್ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಪೈಪ್ಲೈನ್ ಬದಲಾಯಿಸುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಸೇರಿದಂತೆ ಎಲ್ಆ್ಯಂಡ್ಟಿ, ಎನ್ಎಚ್ಎಐ, ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.