ಮಂಗಳೂರು: ಹೊರ ದೇಶ, ರಾಜ್ಯಗಳಿಂದ ಮಂಗಳೂರಿನಲ್ಲಿ ಐಟಿ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಸಿಲಿಕಾನ್ ಬೀಚ್ ಪ್ರೋಗ್ರಾಂನ ಬೇಸ್ ಕ್ಯಾಂಪ್ ಇಂದಿನ ತುರ್ತು ಅಗತ್ಯವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಭಿಪ್ರಾಯಪಟ್ಟರು.
ಕರಾವಳಿ ಕರ್ನಾಟಕದಲ್ಲಿ ನ್ಯಾನೋ ಜಿಸಿಸಿ ಹಾಗೂ ಉಪ ಕಚೇರಿಗಳನ್ನು ಸ್ಥಾಪಿಸಲು ಮುಂದಾಗುವ ಬಹುರಾಷ್ಟ್ರೀಯ, ದೇಶೀಯ ಹಾಗೂ ರಾಜ್ಯದ ಕಂಪನಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೊಟ್ಟಾರದ ವರ್ಕ್ವರ್ಕ್ ಟ್ರಯಾಂಗಲ್ನಲ್ಲಿ ಶನಿವಾರ ಅವರು ಸಿಲಿಕಾನ್ ಬೀಚ್ ಪ್ರೋಗ್ರಾಂ ವತಿಯಿಂದ ಆರಂಭಿಸಲಾಗಿರುವ ಬೇಸ್ ಕ್ಯಾಂಪ್ಗೆ ಚಾಲನೆ ನೀಡಿ ಮಾತನಾಡಿದರು.ನಗರದ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ, ಸಿದ್ಧಾಂತಗಳನ್ನು ಬದಿಗೊತ್ತಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಸ್ಥೆಯು ಮಂಗಳೂರಿನಲ್ಲಿ ಐಟಿ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗುವ ಕಂಪನಿಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೀಡಲು ಮುಂದಾಗಿದೆ. ಇದು ಮಂಗಳೂರಿನಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.ಶಿಕ್ಷಣ ಹಬ್ ಆಗಿರುವ ಮಂಗಳೂರು ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳ ಹಬ್ ಕೂಡಾ ಆಗಿದೆ. ಮರಳಿ ಊರಿಗೆ ಅಭಿಯಾನದ ಮೂಲಕ ಈಗಾಗಲೇ ವಿದೇಶಗಳಲ್ಲಿ ಸ್ಟಾರ್ಟ್ಅಪ್ಗಳು ಹಾಗೂ ಉದ್ದಿಮೆಗಳನ್ನು ಹೊಂದಿರುವವರು ಮರಳಿ ಮಂಗಳೂರಿಗೆ ಬರಲು ಬಯಸುತ್ತಿದ್ದಾರೆ. ಅಂತಹವರಿಗೆ ಈ ಬೇಸ್ಕ್ಯಾಂಪ್ ಸಹಕಾರ ನೀಡಲಿದೆ ಎಂದರು.ಬೇಸ್ ಕ್ಯಾಂಪ್ನ ಪ್ರಯೋಜನದಿಂದ ಈಗಾಗಲೇ ಉದ್ಯಮವನ್ನು ಆರಂಭಿಸಿರುವ ಅಮೆರಿಕ ಮೂಲದ ವಿನಾಯಲ್ ಸಂಸ್ಥೆಯ ನಿರ್ದೇಶಕ ನಾಗರಾಜ್ ಆಚಾರ್ಯ ಹಾಗೂ ಎಂತ್ರಪಿ ಸಂಸ್ಥೆಯ ನಿರ್ದೇಶಕ ವಿಶಾಲ್ ತಮ್ಮ ಅನುಭವ ಹಂಚಿಕೊಂಡರು.ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಚಾಲಕ ರೋಹಿತ್ ಭಟ್ ಪ್ರಾಸ್ತಾವಿಕದಲ್ಲಿ, ಕಳೆದ ಎರಡು ವರ್ಷಗಳಲ್ಲಿ ಕರಾವಳಿಯಲ್ಲಿ 40ಕ್ಕೂ ಅಧಿಕ ಹೊಸ ಐಟಿ ಕಂಪನಿಗಳು ಆರಂಭಗೊಂಡಿದ್ದು, 8,000 ಉದ್ಯೋಗಗಳು ಸೃಷ್ಟಿಯಾಗಿವೆ. ಮಂಗಳೂರನ್ನು ಜಾಗತಿಕ ಐಟಿ ನಕ್ಷೆಯಲ್ಲಿ ಪ್ರಮುಖ ಸ್ಥಾನದಲ್ಲಿ ಮಾಡುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು. ಅನನ್ಯ ಲಕ್ಷ್ಮಿ ಬೆನನ್ ನಿರೂಪಿಸಿದರು.ಕರಾವಳಿ ಕರ್ನಾಟಕದಲ್ಲಿ ಕಂಪನಿ ತೆರೆಯಲು ಮುಂದಾಗುವವರಿಗೆ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸುವ ಕಾರ್ಯವನ್ನು ಬೇಸ್ ಕ್ಯಾಂಪ್ ಮೂಲಕ ಮಾಡಲಾಗುತ್ತದೆ. ಆರಂಭಿಕ ಸಮಾಲೋಚನೆಯಿಂದ ಹಿಡಿದು, ನೇಮಕಾತಿ, ಕಾನೂನು ಪಾಲನೆ, ಪ್ರತಿಭಾಶೋಧ, ಕ್ಷೇತ್ರ ಮಟ್ಟದ ಸಿದ್ಧತೆ ಕುರಿತಂತೆ ಬೇಸ್ ಕ್ಯಾಂಪ್ ಮೂಲಕ ಸಹಕಾರ ನೀಡಲಾಗುತ್ತದೆ. ಮುಂದಿನ ನಾಲ್ಕು ವರ್ಷಗಳವರೆಗೆ ಮಂಗಳೂರಿನಲ್ಲಿ ಐಟಿ ಉದ್ಯಮ ಕ್ಷೇತ್ರ ವಿಸ್ತಾರಗೊಳ್ಳುವವರೆಗೆ ಈ ಕ್ಯಾಂಪ್ ತನ್ನ ಸಹಾಯ ಹಸ್ತವನ್ನು ಮುಂದುವರಿಸಲಿದೆ.-ರೋಹಿತ್ ಭಟ್, ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಚಾಲಕ ಹಾಗೂ ರೋಬೋಸಾಪ್ಟ್ ಸಂಸ್ಥಾಪಕರು.