ಸಾರಾಂಶ
೩ ಹೊಸ ವಾಹನಗಳು ಸೇರಿ ೧೭ ವಾಹನಗಳು ಘನತ್ಯಾಜ್ಯ ಸಂಗ್ರಹಣೆ ಮಾಡಲಿದೆ.
ಶಿರಸಿ: ಸ್ವಚ್ಛ ಭಾರತ್ ಮಿಷನ್ ೧.೦ ಯೋಜನೆಯಡಿ ಖರೀದಿಸಲಾದ ಘನತ್ಯಾಜ್ಯ ಸಂಗ್ರಹಣಾ ೩ ವಾಹನಗಳು ಮತ್ತು ಟ್ರಾಮೆಲ್ ಸಪರೇಟರ್ಗೆ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮನೆ ಮನೆ ಕಸ ಸಂಗ್ರಹಣಾ ೧೪ ವಾಹನಗಳು ಈಗಾಗಲೇ ಕೆಲಸ ಮಾಡುತ್ತಿವೆ. ೩ ಹೊಸ ವಾಹನಗಳು ಸೇರಿ ೧೭ ವಾಹನಗಳು ಘನತ್ಯಾಜ್ಯ ಸಂಗ್ರಹಣೆ ಮಾಡಲಿದೆ. ನಗರದ ೩೧ ವಾರ್ಡ್ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಮಳೆಗಾಲ ಪೂರ್ವದ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ವಾಡಿಕೆಗಿಂತ ಒಂದು ವಾರದ ಮುಂಚೆ ಮಳೆ ಆರಂಭಗೊಂಡಿರುವುದಕ್ಕೆ ಸ್ವಚ್ಛ ಅಡಚಣೆಯಾಗಿದೆ. ಕುಡಿಯುವ ನೀರು ಪೂರೈಕೆಗೆ ₹೬೭ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಲೋಪವಾಗಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸರಿಪಡಿಸಲು ಸೂಚನೆ ನೀಡಿದ್ದೇನೆ. ಕಳಪೆ ಕಾಮಗಾರಿಗೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದರು.ಪ್ರಭಾರಿ ಪೌರಾಯುಕ್ತ ಶಿವರಾಜ ಮಾಹಿತಿ ನೀಡಿ, ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಘನತ್ಯಾಜ್ಯ ಸಂಗ್ರಹಣೆಗೆ ತಲಾ ೧ ವಾಹನಕ್ಕೆ ₹೧೦ ಲಕ್ಷದಂತೆ ₹೩೦ ಲಕ್ಷ ವೆಚ್ಚದಲ್ಲಿ ೩ ವಾಹನಗಳನ್ನು ಖರೀದಿಸಲಾಗಿದೆ. ವಾಹನದಲ್ಲಿ ಒಣ ಕಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕರಿಗುಂಡಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಟ್ರಾಮೆಲ್ ಸಪರೇಟರ್ ಸ್ಥಾಪಿಸಲಾಗಿದ್ದು, ಹಸಿಕಸ ಮತ್ತು ಒಣ ಕಸ ಪ್ರತ್ಯೇಕಿಸಿ, ಪ್ರತಿನಿತ್ಯ ೨೫ ಟನ್ ಕಸ ವಿಲೇವಾರಿ ಮಾಡಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಖಾದರ್ ಆನವಟ್ಟಿ, ವೀಣಾ ಶೆಟ್ಟಿ, ಶೈಲೇಶ ಜೋಗಳೇಕರ, ಕಂದಾಐ ನಿರೀಕ್ಷಕ ಆರ್.ಎಂ.ವೆರ್ಣೇಕರ ಮತ್ತಿತರರು ಇದ್ದರು.