ಸಕಲೇಶಪುರ: ಅರ್ಜುನ ಸ್ಮಾರಕ ನಾಮಕಾವಸ್ತೆ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಸೋಮವಾರ ಯಸಳೂರು ಸಮೀಪದ ಅರ್ಜುನ ಆನೆ ಮೃತಪಟ್ಟ ದಬ್ಬಳ್ಳಿ ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಅರ್ಜುನ ಸ್ಮಾರಕ ಪರಿಶೀಲನೆ ನಡೆಸಿ ಮಾತನಾಡಿ, ಅರ್ಜುನ ಆನೆ ಮೃತಪಟ್ಟ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವರು ಆನೆ ಮೃತಪಟ್ಟ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಬೇಕಿರುವ ಅನುದಾನ ಸಹ ಶೀಘ್ರವೆ ಬಿಡುಗಡೆ ಮಾಡಲಾಗುವುದು ಎಂದಿದ್ದರು. ಆದರೆ, ಆನೆ ಮೃತಪಟ್ಟು ವರ್ಷ ಕಳೆದರೂ ಯಾವುದೇ ಪ್ರಗತಿಯಾಗದಾಗಿದ್ದು ಈ ಪ್ರದೇಶದ ಅಭಿವೃದ್ಧಿಗೆ ಐದು ಕೋಟಿ ಅನುದಾನದ ಬೇಡಿಕೆ ಇಟ್ಟಿದ್ದೆ. ೩.೫ ಲಕ್ಷದ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಕಂಚಿನ ಪ್ರತಿಮೆ ಸ್ಥಾಪನೆ ನಮ್ಮ ಆಶಯವಾಗಿತ್ತು. ಆದರೆ, ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೇವಲ ೧೬ ಲಕ್ಷ ಬಿಡುಗಡೆ ಮಾಡಿದ್ದು ಫೈಬರ್ ಪ್ರತಿಮೆ ಸ್ಥಾಪಿಸಿದೆ. ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಓದಗಿಸದೆ ತಾರತುರಿಯಲ್ಲಿ ಉದ್ಘಾಟನೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸದೆ ನಾಮ್‌ಕಾವಸ್ತೆ ಉದ್ಘಾಟನೆಗೆ ನಾವು ಅವಕಾಶ ನೀಡುವುದಿಲ್ಲ ಎಂದರು.