ಸಂಡೂರು: ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಬುಧವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ನೆರವೇರಿಸಿ, ಮುಕ್ತಾಯಗೊಂಡ ಕೆಲವು ಕಾಮಗಾರಿಗಳನ್ನು ಉದ್ಘಾಟಿಸಿದರು.
ತಾರಾನಗರ ಗ್ರಾಮದ ಆಶ್ರಯ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅನುದಾನ ₹೩೩.೦೬ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ೨ ಶಾಲಾ ಕೊಠಡಿ, ಸಣ್ಣ ನೀರಾವರಿ ಇಲಾಖೆ ಅನುದಾನ ₹೪.೯೦ ಕೋಟಿ ವೆಚ್ಚದಲ್ಲಿ ತಾರಾನಗರ ಗ್ರಾಮದಿಂದ ಬನ್ನಿಹಟ್ಟಿ ಗ್ರಾಮದವರೆಗೆ ನಾರಿಹಳ್ಳ ಅಭಿವೃದ್ಧಿ ಮತ್ತು ಚೆಕ್ಡ್ಯಾಂ ನಿರ್ಮಾಣ, ಕುರೆಕುಪ್ಪ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ ₹೧.೮೫ ಕೋಟಿ ವೆಚ್ಚದಲ್ಲಿ ಪಿ.ಎಂ.ಶ್ರೀ ಸರ್ಕಾರಿ ಪ್ರೌಢ ಶಾಲೆಯಲ್ಲಿ ೧೦ ಕೊಠಡಿಗಳ ನಿರ್ಮಾಣ, ಹಳೆ ದರೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನ ₹೪೯.೪೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ೩ ಶಾಲಾ ಕೊಠಡಿಗಳು ಹಾಗೂ ಹೊಸ ದರೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಪಿಟಿಸಿಎಲ್ ಸಿಎಸ್ಆರ್ ಅನುದಾನ ₹೩ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಶಾಲಾ ಕೊಠಡಿಗಳನ್ನು ಶಾಸಕರು ಉದ್ಘಾಟಿಸಿದರು.ಭೂಮಿಪೂಜೆ:
ಲೋಕೋಪಯೋಗಿ ಇಲಾಖೆಯ ಅನುದಾನ ₹೫.೫೦ ಕೋಟಿ ವೆಚ್ಚದಲ್ಲಿ ತಾರಾನಗರ ಗ್ರಾಮದ ರಾಜ್ಯ ಹೆದ್ದಾರಿ ೪೦ ರಿಂದ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ, ಕುರೆಕುಪ್ಪ ಗ್ರಾಮದ ೬ನೇ ವಾರ್ಡಿನ ಗೌರಿಶಂಕರ ಕಾಲೊನಿಯಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ ₹೧.೨೭ ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಹಳೆ ದರೋಜಿ ಗ್ರಾಮದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅನುದಾನ ₹೨೦ ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿಪೂಜೆಯನ್ನು ನೆರವೇರಿಸಿದರು.ಕುರೆಕುಪ್ಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮದ ಘಟಕದ ಅಧ್ಯಕ್ಷ ಮಲ್ಲಯ್ಯ ಎನ್, ಪ್ರಧಾನ ಕಾರ್ಯದರ್ಶಿ ಹೊನ್ನೂರಸ್ವಾಮಿ ಎನ್ ಮುಂತಾದವರು ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿ, ಗ್ರಾಮದಲ್ಲಿ ಗುಡ್ಡದಲ್ಲಿ ಹೊಸದಾಗಿ ನಿರ್ಮಿಸಿರುವ ಪಿಎಂಶ್ರೀ ಶಾಲೆಗೆ ಹೋಗಲು ಸೂಕ್ತವಾದ ರಸ್ತೆ ಇಲ್ಲ. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಕಂಪೌಂಡ್, ವಿದ್ಯುತ್, ಶೌಚಾಲಯ ಮುಂತಾದ ಸೌಲಭ್ಯಗಳಿಲ್ಲ. ಶಾಲೆಯಲ್ಲಿ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಿದ ಮೇಲೆಯೇ ಶಾಲೆಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.
ಶಾಸಕರು ಮುಖಂಡರ ಬೇಡಿಕೆಗೆ ಸಹಮತವನ್ನು ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಶಾಲೆಯಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಎಇಇ ಪ್ರಕಾಶ್ ನಾಯ್ಕ್, ಕುರೆಕುಪ್ಪ ಪುರಸಭೆ ಅಧ್ಯಕ್ಷ ಕೆ. ಸೂರ್ಯನಾರಾಯಣ, ಉಪಾಧ್ಯಕ್ಷೆ ರೇಖಾ, ನಿಕಟಪೂರ್ವ ಅಧ್ಯಕ್ಷ ಕಲ್ಗುಡೆಪ್ಪ, ಸದಸ್ಯರಾದ ಎನ್. ಸೋಮಪ್ಪ, ಎಸ್.ಕೆ. ಬಾಷ, ಮುಖ್ಯಾಧಿಕಾರಿ ಅರುಣ್ ಕುಮಾರ್, ಮುಖಂಡರಾದ ಗಡಾದ್ ರಮೇಶ್, ಮಹೇಶ್, ಭುವನೇಶ್ ಮೇಟಿ, ತಿಮ್ಮಪ್ಪ, ಪಿಡಿಒಗಳು ಉಪಸ್ಥಿತರಿದ್ದರು.