ಎಂಸಿಡಿಸಿಸಿ ಬ್ಯಾಂಕ್‌ಗೆ ಶಾಸಕ ಗಣೇಶ್‌ ನಾಮಪತ್ರ

| Published : Jun 18 2025, 11:49 PM IST / Updated: Jun 18 2025, 11:50 PM IST

ಸಾರಾಂಶ

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್‌ ಎಂಸಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರತಿಷ್ಠಿತ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ನಾಮಪತ್ರ ಸಲ್ಲಿಸಿದರು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌ ಜೊತೆಗೂಡಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ಬಳಿಕ ಎಂಸಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನದ ಅಭ್ಯರ್ಥಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ, ಮುಖ್ಯಮಂತ್ರಿಗಳ ಸೂಚನೆಯ ಜೊತೆಗೆ ಪಕ್ಷದ ತೀರ್ಮಾನ ಮಾಡಿದ್ದರಿಂದ ಸ್ಪರ್ಧಿಸುತ್ತಿದ್ದೇನೆ ಎಂದರು.

ಪಕ್ಷದ ಹಿತದೃಷ್ಟಿಯಿಂದ ಚುನಾವಣೆಗೆ ನಿಂತಿದ್ದೇನೆ. ನಾನು ಮತದಾರರ ಟೂರ್‌ ಕಳುಹಿಸಲ್ಲ, ಅಡ್ಡ ಮತದಾನವಾಗಲ್ಲ, ಗೆಲುವಿನ ಬಳಿಕ ರೈತರ ಸಾಲ ಕೊಡಿಸುವ ಪ್ರಯತ್ನ ಮಾಡುವೆ ಎಂದರು. ತಾಲೂಕಿನಲ್ಲಿ 33 ಮತಗಳಿದ್ದು, 22 ಕಾಂಗ್ರೆಸ್‌ ಬೆಂಬಲಿತರು ಇದ್ಧಾರೆ. ಓರ್ವ ಪಕ್ಷೇತರರು ಇದ್ದಾರೆ. ಗೆಲುವಿನಲ್ಲಿ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಮಯದಲ್ಲಿ ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್‌, ಎಪಿಎಂಸಿ ಅಧ್ಯಕ್ಷ ಆರ್.ಎಸ್.ನಾಗರಾಜು, ಹಾಪ್‌ಕಾಮ್ಸ್‌ ಅಧ್ಯಕ್ಷ ಎಂ.ನಾಗೇಶ್‌, ತಾಪಂ ಮಾಜಿ ಅಧ್ಯಕ್ಷರಾದ ಎಚ್.ಎನ್.ನಟೇಶ್‌, ಸೋಮಹಳ್ಳಿ ಮಧು,ಎಚ್.ಎನ್.ಬಸವರಾಜು, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ, ಕೋಟೆಕೆರೆ ಫ್ಯಾಕ್‌ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಪುರಸಭೆ ಅಧ್ಯಕ್ಷ ಮಧು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮೊಳ್ಳಯ್ಯನಹುಂಡಿ ಬಸವರಾಜು, ಎಚ್.ಆರ್.ಕುಮಾರ್, ಪುರಸಭೆ ಅಧ್ಯಕ್ಷ ಮಧು, ಮಾಜಿ ಅಧ್ಯಕ್ಷ ರಮೇಶ್‌, ಕಾಂಗ್ರೆಸ್‌ ಮುಖಂಡರಾದ ಟಿ.ಪಿ.ನಾಗರಾಜು, ಬಿ.ಎಸ್.ಪಂಚಾಕ್ಷರಿ, ದೇವರಹಳ್ಳಿ ಪ್ರಭು, ನೀಲಕಂಠಪ್ಪ ಹೊರೆಯಾಲ, ಕಿಲಗೆರೆ ಪ್ರಸಾದ್‌ ಸೇರಿದಂತೆ ಡಿಲಿಗೇಟ್ಸ್‌ ಹಾಗು ಕಾರ್ಯಕರ್ತರು ಇದ್ದರು.

ಗೆಲುವಿಗೆ ಪೂರಕ ವಾತಾವರಣ

ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಚುನಾವಣೆಯಲ್ಲಿ ಈ ಬಾರಿ ಗೆಲುವಿನ ವಾತಾವರಣವಿದೆ ಎಂದು ಶಾಸಕರೂ ಆದ ಎಂಸಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನದ ಅಭ್ಯರ್ಥಿ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ, ಬ್ಯಾಂಕ್‌ ಆಡಳಿತ ಚುಕ್ಕಾಣಿ ಹಿಡಿಯಲು ಪೂರಕ ವಾತಾವರಣೆ ಕೂಡ ಇದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟಿರುವ ಟಾಸ್ಕ್‌ನಲ್ಲಿ ಖಂಡಿತ ಪಾಸಾಗುವೆ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.