ಸಾರಾಂಶ
ಉಡುಪಿ ಜಿಲ್ಲೆಯಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಜಿಲ್ಲೆಗೆ ಅಗತ್ಯವಾಗಿರುವ ಹೊರ ಜಿಲ್ಲೆ-ರಾಜ್ಯ ಕಾರ್ಮಿಕರ ಸಮಸ್ಯೆಗೆ ಶಾಸಕರ ಸ್ಪಂದನೆಕನ್ನಡಪ್ರಭ ವಾರ್ತೆ ಬೈಂದೂರು
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಉಡುಪಿ ಜಿಲ್ಲೆಯು ಅನೇಕ ವರ್ಷಗಳಿಂದ ವಲಸೆ ಕಾರ್ಮಿಕರಿಗೆ ಉದ್ಯೋಗದಾತವಾಗಿ ಪರಿಣಮಿಸಿದ್ದಾರೂ, ಜಿಲ್ಲಾಡಳಿತ ಈ ವಲಸೆ ಕಾರ್ಮಿಕರಿಗೆ ಕನಿಷ್ಠ ವಸತಿ, ನೀರು, ಶೌಚಾಲಯದ ವ್ಯವಸ್ಥೆ ಮಾಡುವಲ್ಲಿ ವಿಫವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ, ಮನೆಗೆಲಸ ಅಷ್ಟೇ ಅಲ್ಲದೆ ಕೃಷಿ ಕೆಲಸಗಳಿಗೂ ಈ ವಲಸೆ ಕಾರ್ಮಿಕರನ್ನು ಅವಲಂಬಿಸಲಾಗುತ್ತಿದೆ. ಬಾಗಲಕೋಟೆ, ಬಳ್ಳಾರಿ, ರಾಯಚೂರು, ಹಾವೇರಿ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಹೊಟ್ಟೆಪಾಡಿಗಾಗಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಸಮರ್ಪಕವಾದ ಸೂರಿಲ್ಲ, ಇದ್ದ ಕಡೆ ಮೂಲಸೌಕರ್ಯಗಳಿಲ್ಲ. ವಸತಿಗೆ ದುಬಾರಿ ಬಾಡಿಗೆ ನೀಡಲಾಗದೇ ಕೆಲವು ಕಡೆ ವಲಸೆ ಕಾರ್ಮಿಕರು ಶಾಲಾ ಮೈದಾನದಲ್ಲಿ ಮಲಗುವಂತಹ ಸ್ಥಿತಿ ಇದೆ. ಆದರೆ ಅವರು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದರಿಂದ ಜಿಲ್ಲಾಡಳಿತವೇ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಪರಿಸರ ಅನೈರ್ಮಲ್ಯತೆ ಮತ್ತು ಇತರ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದವರು ತಿಳಿಸಿದ್ದಾರೆ.ಮುಖ್ಯವಾಗಿ ಬೈಂದೂರು ಹಾಗೂ ಕುಂದಾಪುರ ಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಇರುವುದರಿಂದ ಅವರಿಗೆ ವಸತಿ ಸಮುಚ್ಛಯ ಮಾದರಿಯಲ್ಲಿ ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಹಾಗೂ ಪ್ರಸ್ತಾವನೆ ತಯಾರಿಸಲು ಈಗಾಗಲೇ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂಬಂಧಪಟ್ಟ ಸಚಿವರ ಗಮನಕ್ಕೂ ಈ ವಿಚಾರವನ್ನು ಪತ್ರ ಮುಖೇನ ತರಲಾಗಿದೆ ಹಾಗೂ ಉಡುಪಿ ಜಿಲ್ಲಾಡಳಿತ ಈ ಉದ್ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ ಕನಿಷ್ಠ ನಿವೇಶನವನ್ನು ಒದಗಿಸಬೇಕು ಶಾಸಕರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.