ಸಾರಾಂಶ
ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೈಂದೂರು
ಇಲ್ಲಿನ ತಾಲೂಕು ಕಚೇರಿಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಕ್ರಮ ಸಕ್ರಮ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆಸಿದರು.ಕಂದಾಯ ಇಲಾಖೆಯಲ್ಲಿ ಜನರು ಸಲ್ಲಿಸುವ ವಿವಿಧ ಅರ್ಜಿಗಳನ್ನು ಅಧಿಕಾರಿಗಳು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವ ಸಮಯದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ಬಗೆಸಹರಿಸುವ ನಿಟ್ಟಿನಲ್ಲಿ ಶಾಸಕರು ಸಂಬಂಧಪಟ್ಟ ಅಧಿಕಾರಿಯವರಿಗೆ ಫೋನ್ ಕರೆಯ ಮೂಲಕ ಗಮನಕ್ಕೆ ತಂದು ತಾಂತ್ರಿಕ ಸಮಸ್ಯೆಯನ್ನು ಸಭೆಯಲ್ಲೇ ಬಗೆಹರಿಸಿದರು.ಸಮಿತಿ ಮುಂದೆ ಅಂತಿಮವಾಗಿ ಹಾಜರುಪಡಿಸಲು ಹಾಗೂ ಜನವರಿ 2ನೇ ವಾರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಬಗರ್ ಹುಕುಂ ಕಡತ ವಿಲೇವಾರಿ ಸಪ್ತಾಹ ಸಲುವಾಗಿ ಬಾಕಿ ಇರುವ ಕಡತಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಶಾಸಕರು ಪೂರ್ವಭಾವಿ ಚರ್ಚೆ ನಡೆಸಿದರು.
94 ಸಿ ಅಡಿ ಅರ್ಹ ಅರ್ಜಿಗಳು ವಿಲೇವಾರಿ ಬಾಕಿ ಇರುವ ಗ್ರಾಮಗಳಲ್ಲಿ ಸಮಸ್ಯಾತ್ಮಕವಲ್ಲದ ಅರ್ಜಿಗಳಿಗೆ ಕೂಡಲೇ ಹಕ್ಕು ಪತ್ರ ಮಂಜೂರು ಮಾಡಿ ಬಡವರಿಗೆ ಹಕ್ಕು ಪತ್ರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ಸಭೆಯಲ್ಲಿ ತಾಲೂಕು ತಹಸೀಲ್ದಾರರು, ಉಪ ತಹಸೀಲ್ದಾರರು, ಬಗರ್ ಹುಕುಂ ತಂತ್ರಾಂಶದ ಜಿಲ್ಲಾ ಸಮಾಲೋಚಕರು, ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.