ಹೊಳೆನರಸೀಪುರದ ದೇವಾಲಯದಲ್ಲಿ ಜಾರಿ ಬಿದ್ದ ಶಾಸಕ ಎಚ್‌.ಡಿ. ರೇವಣ್ಣ: ಪಕ್ಕೆಲುಬಿಗೆ ಹಾನಿ

| Published : Jul 18 2024, 01:32 AM IST / Updated: Jul 18 2024, 09:55 AM IST

HD revanna
ಹೊಳೆನರಸೀಪುರದ ದೇವಾಲಯದಲ್ಲಿ ಜಾರಿ ಬಿದ್ದ ಶಾಸಕ ಎಚ್‌.ಡಿ. ರೇವಣ್ಣ: ಪಕ್ಕೆಲುಬಿಗೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆಮರಸೀಪುರದ ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರು ಜಾರಿ ಬಿದ್ದು, ಅವರ ಪಕ್ಕೆಲುಬುಗಳಿಗೆ ಹಾನಿಯಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು, ವಿಶ್ರಾಂತಿಗಾಗಿ ಬೆಂಗಳೂರಿಗೆ ತೆರಳಿದ್ದಾರೆ.

 ಹೊಳೆನರಸೀಪುರ  : ತಾಲೂಕಿನ ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರು ಜಾರಿ ಬಿದ್ದು, ಅವರ ಪಕ್ಕೆಲುಬುಗಳಿಗೆ ಹಾನಿಯಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು, ವಿಶ್ರಾಂತಿಗಾಗಿ ಬೆಂಗಳೂರಿಗೆ ತೆರಳಿದ್ದಾರೆ

ಶಾಸಕ ಎಚ್.ಡಿ.ರೇವಣ್ಣ ಅವರು ದೈವಭಕ್ತರಾಗಿದ್ದು, ಆಷಾಢ ಪ್ರಥಮ ಏಕಾದಶಿಯ ವಿಶೇಷ ದಿನದ ಪ್ರಯುಕ್ತ ಉಪವಾಸ ವ್ರತ ಕೈಗೊಂಡು ಸ್ಪಗ್ರಾಮವಾದ ಹರದನಹಳ್ಳಿಯ ಕುಲದೇವರು ಶ್ರೀ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ್ದರು. ಶ್ರೀ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಮಂಗಳಾರತಿ, ತೀರ್ಥ, ಪ್ರಸಾದ ಸ್ವೀಕರಿಸಿ, ಹೊರಗೆ ಮೆಟ್ಟಿಲು ಇಳಿಯುವಾಗ ಕಾಲುಜಾರಿ ಬಿದ್ದಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ಸಿಟಿ ನ್ಕ್ಯಾನ್ ಮಾಡಿದಾಗ ಪಕ್ಕೆಲುಬುಗಳಿಗೆ ಹಾನಿಯಾಗಿರುವುದು ತಿಳಿದು ಬಂದಿದೆ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಧನಶೇಖರ್ ಉಪಸ್ಥಿತಿಯಲ್ಲಿ ಕೀಲುಮೂಳೆ ತಜ್ಞ ವೈದ್ಯರಾದ ಡಾ. ದಿನೇಶ್ ಹಾಗೂ ಡಾ.ದಿನೇಶ್ ಕುಮಾರ್ ಅವರು ಶಾಸಕರಿಗೆ ಚಿಕಿತ್ಸೆ ನೀಡಿ, ಎದೆಯ ಭಾಗಕ್ಕೆ ಬೆಲ್ಟ್ ಅಳವಡಿಸಿದರು. ಡಾ. ಸತ್ಯಪ್ರಕಾಶ್ ಇದ್ದರು.

ಚಿಕಿತ್ಸೆ ಪಡೆದ ಶಾಸಕ ಎಚ್.ಡಿ.ರೇವಣ್ಣ ಅವರು ವಿಶ್ರಾಂತಿಗಾಗಿ ಬೆಂಗಳೂರಿಗೆ ತೆರಳಿದರು. ನೂರಾರು ಸಂಖ್ಯೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ್ದರು. ಕೆಲವು ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂದಿತು.

ಜೆಡಿಎಸ್ ಕಾರ್ಯಕರ್ತ ರಾಘವೇಂದ್ರ ಬಿ.ಎಸ್. ಕಣ್ಣೀರು ಹಾಕುತ್ತ ಮಾತನಾಡಿ, ‘ನಮ್ಮ ನಾಯಕರಿಗೆ ಇದ್ದ ಗಂಡಾಂತರವೊಂದು ಹರದನಹಳ್ಳಿ ದೇವೇಶ್ವರ ದೇವಾಲಯದ ಮೆಟ್ಟಿಲುಗಳ ಮೇಲೆ ಕಳೆದಿದೆ. ಅವರು ಬಲಭಾಗಕ್ಕೆ ತಿರುಗಿ ಬೀಳದೇ ಹಾಗೇ ಕುಳಿತ್ತಿದ್ದರೆ ಅವರ ಬೆನ್ನಹುರಿಗೆ ಹಾನಿಯಾಗುತ್ತಿತ್ತು, ಪುಣ್ಯ ಇಷ್ಟಕ್ಕೆ ಮುಗಿದಿದೆ’ ಎಂದು ನುಡಿದರು.