ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ರಂಗನಾಥಪುರ ಕ್ರಾಸ್ ಗ್ರಾಮದ ಬಳಿ ಶಾಸಕ ಎಚ್.ಟಿ.ಮಂಜು ಸೇರಿದಂತೆ ಅನೇಕ ಗಣ್ಯರು ಮತ್ತು ಕನ್ನಡಾಭಿಮಾನಿಗಳು ಸ್ವಾಗತಿಸಿದರು.ನಾಗಮಂಗಲದಿಂದ ತಾಲೂಕಿಗೆ ಆಗಮಿಸಿದ ರಥಯಾತ್ರೆಯನ್ನು ಜಾನಪದ ಕಲಾ ತಂಡಗಳೊಂದಿಗೆ ಡೊಳ್ಳುಕುಣಿತ, ಪೂಜಾಕುಣಿತ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೆರವಣಿಗೆಗೆ ಶಾಸಕ ಎಚ್.ಟಿ.ಮಂಜು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕನ್ನಡ ಜ್ಯೋತಿರಥ ಯಾತ್ರೆಯೂ 120 ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಲಿದೆ. ತಾಲೂಕಿನಲ್ಲಿ ಇಂದು ಮತ್ತೆ ನಾಳೆ ಯಾತ್ರೆ ಕೈಗೊಳ್ಳಲಿದೆ ಎಂದರು.ಮಂಡ್ಯ ಜಿಲ್ಲೆಯ ಹಾಗೂ ರಾಜ್ಯದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಜನಪದವನ್ನು ಈ ರಥದಲ್ಲಿ ಬಿಂಬಿಸಲಾಗಿದೆ. ಕನ್ನಡ ಸಾಹಿತ್ಯಾಸಕ್ತರು ಕನ್ನಡ ಜ್ಯೋತಿರಥಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತೆರಳುವ ಮಾರ್ಗದಲ್ಲಿ ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡುವ ಮೂಲಕ ನಮ್ಮ ತಾಲೂಕಿನಿಂದ ಮುಂದಿನ ತಾಲೂಕಿಗೆ ಕಳುಹಿಸಿಕೊಡುವ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕಾಗಿದೆ ಎಂದರು.
ಮಂಗಳವಾರ ವಿವಿಧ ಪಂಚಾಯ್ತಿಗಳಲ್ಲಿ ಸಂಚರಿಸಿ ಪಟ್ಟಣದ ಪ್ರವಾಸಿಮಂದಿರದಲ್ಲಿ ತಂಗಿದ್ದು ಬುಧವಾರ ಬೆಳಗ್ಗೆ ಮುರುಕನಹಳ್ಳಿ ಮಾರ್ಗವಾಗಿ ತೆಂಡೆಕೆರೆ ನಂತರ ಪಾಂಡವಪುರ ತಾಲೂಕಿಗೆ ಪಯಣಿಸಲಿದೆ.ಕನ್ನಡ ಜ್ಯೋತಿರಥಯಾತ್ರೆ ಸ್ವಾಗತಿಸುವ ವೇಳೆ ತಾಪಂ ಇಒ ಸುಷ್ಮಾ, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಸಿಡಿಪಿಒ ಅರುಣಕುಮಾರ್, ಸಮಾಜಕ್ಯಾಣಾಧಿಕಾರಿ ದಿವಾಕರ್, ಬಿಇಒ ಸೀತಾರಾಮು, ನರೇಗ ಎ.ಡಿ. ಡಾ.ನರಸಿಂಹರಾಜು, ಪಿಡಿಒಗಳು, ಶಾಲಾ ಮಕ್ಕಳು ಮತ್ತು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕನ್ನಡದ ಅಭಿಮಾನಿಗಳು ಹಾಜರಿದ್ದರು.