ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಶಾಸಕರ ಅನುದಾನದ 1.20 ಕೋಟಿ ರು. ವೆಚ್ಚದಲ್ಲಿ 82 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಡಕ್, ಸ್ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಉಳಿದ 36 ಲಕ್ಷ ರು. ವೆಚ್ಚದ ಕಾಮಗಾರಿ ಬಾಕಿ ಉಳಿದಿದ್ದು, ಸುಳ್ಳು ಪ್ರಚಾರ ಪಡೆಯುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಶಾಸಕರ ಅನುದಾನದ 1.20 ಕೋಟಿ ರು. ವೆಚ್ಚದಲ್ಲಿ 82 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ, ಡಕ್, ಸ್ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಉಳಿದ 36 ಲಕ್ಷ ರು. ವೆಚ್ಚದ ಕಾಮಗಾರಿ ಬಾಕಿ ಉಳಿದಿದ್ದು, ಸುಳ್ಳು ಪ್ರಚಾರ ಪಡೆಯುವ ಅಗತ್ಯವಿಲ್ಲ ಎಂದು ರೈತಮುಖಂಡ, ಗುತ್ತಿಗೆದಾರ ಬಲರಾಮೇಗೌಡ ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ 28 ಲಕ್ಷ ರು. ವೆಚ್ಚದ ಕಾಮಗಾರಿ ಮಾಡಿ ಶಾಸಕರ ಬೆಂಬಲಿಗರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂಬ ಗ್ರಾಮ ಯುವಕ ನಿತಿನ್ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ಗ್ರಾಮದಲ್ಲಿ 82 ಲಕ್ಷ ರು. ವೆಚ್ಚದಲ್ಲಿ 440 ಮೀಟರ್ ರಸ್ತೆ, 470 ಮೀಟರ್ ಚರಂಡಿ, 35 ಮೀಟರ್ ಡಕ್ ಹಾಗೂ 140 ಮೀಟರ್ ಸ್ಲ್ಯಾಬ್ ಹಾಕಲಾಗಿದೆ. ರಸ್ತೆ ನಿರ್ಮಾಣಕ್ಕೆ ನಿತಿನ್ ಅವರ ಸಂಬಂಧಿಕರೇ ಜಾಗ ಬಿಡದ ಕಾರಣ 32 ಲಕ್ಷ ರು. ವೆಚ್ಚದ ಕಾಮಗಾರಿ ಬಾಕಿ ಉಳಿದಿದೆ. ದುರುದ್ದೇಶ ಪೂರಕವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಮನ್ಮುಲ್ ಮಾಜಿ ನಿರ್ದೇಶಕ ಸಿ.ಸ್ವಾಮೀಗೌಡ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ರಸ್ತೆ ಕಾಮಗಾರಿ ಪೂಜೆ ಮಾಡಲು ಬಂದಾಗ 28 ಲಕ್ಷ ಅನುದಾನ ರಸ್ತೆ ನಿರ್ಮಾಣಕ್ಕೆ ಸಾಕಾಗುವುದಿಲ್ಲ. ಹೆಚ್ಚುವರಿ ಅನುದಾನ ಕೊಟ್ಟು ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಹೆಚ್ಚುವರಿ 1.20 ಕೋಟಿ ರು. ಅನುದಾನ ನೀಡಿದ್ದಾರೆ ಎಂದರು.

82 ಲಕ್ಷ ರು. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ರಸ್ತೆಗೆ ಜಾಗ ಬಿಡುವ ಸಮಸ್ಯೆ ಪೂರ್ಣಗೊಂಡರೆ ಉಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಭಿವೃದ್ಧಿ ವಿಚಾರದಲ್ಲಿ ತೊಂದರೆ ಕೊಡದೇ ಸಹಕಾರ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಬಿ.ತಮ್ಮಣ್ಣ, ಮಾಜಿ ಉಪಾಧ್ಯಕ್ಷ ಈರಾಚಾರ್, ಮುಖಂಡರಾದ ಸಿ.ಚನ್ನಪ್ಪ, ಪ್ರಕಾಶ್, ಭೀಮಯ್ಯ, ಕ್ಯಾತಶೆಟ್ಟಿ, ಸಿ.ಕೆ.ನಾರಾಯಣ, ಮಹದೇವು, ಶಂಕರ, ಜಯರಾಂ, ರಘು, ಸೇರಿದಂತೆ ಹಲವರು ಹಾಜರಿದ್ದರು.