ಕನ್ನಡಪ್ರಭ ವಾರ್ತೆ ಬೀಳಗಿ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಗುರುವಾರ ಶಾಸಕ ಜೆ.ಟಿ.ಪಾಟೀಲ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಡ್ಲಿ ಬಹಳಷ್ಟು ತಿಳಿಯಾಗಿರುವದನ್ನು ಕಂಡು ಇಡ್ಲಿಯನ್ನು ಇಷ್ಟು ತಿಳಿಯಾಗಿ ಕಡ್ಡಿಯಂತೆ ಮಾಡಲು ಯಾರು ಹೇಳಿದ್ದು ಎಂದು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಬೀಳಗಿ

ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಗುರುವಾರ ಶಾಸಕ ಜೆ.ಟಿ.ಪಾಟೀಲ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಡ್ಲಿ ಬಹಳಷ್ಟು ತಿಳಿಯಾಗಿರುವದನ್ನು ಕಂಡು ಇಡ್ಲಿಯನ್ನು ಇಷ್ಟು ತಿಳಿಯಾಗಿ ಕಡ್ಡಿಯಂತೆ ಮಾಡಲು ಯಾರು ಹೇಳಿದ್ದು ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕರು ಊಟ ಮಾಡುವುದಾಗಿ ಹೇಳಿದಾಗ ಕ್ಯಾಂಟೀನ ಸಿಬ್ಬಂದಿ ಎರಡು ಚಪಾತಿ, ಅನ್ನ ಸಾಂಬಾರು, ಪಲ್ಲೆ, ಮೊಸರನ್ನ ಸೇರಿದಂತೆ ಒಂದು ಊಟದ ತಟ್ಟೆಯನ್ನು ನೀಡಿದರು. ಒಂದು ಚಪಾತಿಯಲ್ಲಿ ಎರಡು ಪದರಗಳಾಗಿ ಕೊಡುವುದೇ, ಎರಡು ಚಪಾತಿಯನ್ನು ಇಡಿಯಾಗಿ ಕೊಡಬೇಕು. ಇದು ಬಿಟ್ಟು ಒಂದು ಚಪಾತಿಯನ್ನು ಸೀಳಿ ಗಾಳಿಗೆ ಹಾರುವಂತ ಎರಡು ಪದರಗಳನ್ನು ನೀಡಿದರು. ಇದಕ್ಕೆ ಸಿಟ್ಟಿಗೆದ್ದ ಜೆ.ಟಿ.ಪಾಟೀಲ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ಮೊಸರನ್ನ ಸರಿಯಾಗಿಲ್ಲ, ಅನ್ನ ಸಾಂಬಾರು ಇದ್ದುದರಲ್ಲಿ ತಕ್ಕಮಟ್ಟಿಗೆ ಚನ್ನಾಗಿದೆ ಎಂದು ಹೇಳಿದರು.ತಹಸೀಲ್ದಾರ್‌ ವಿನೋದ ಹತ್ತಳ್ಳಿ ಮತ್ತು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ ಅವರಿಗೆ ಇಂದಿರಾ ಕ್ಯಾಂಟೀನ್‌ ಪರಿಸರ ಶುಚಿಯಾಗಿರಬೇಕು ಮತ್ತು ಸುಂದರವಾಗಿರಬೇಕು. ತಿಂಡಿ ಮತ್ತು ಊಟ ರುಚಿಕಟ್ಟಾಗಿರಬೇಕು. ನೀವು ಕಾಲಕಾಲಕ್ಕೆ ಭೇಟಿ ನೀಡಿ ಸೇವನೆ ಮಾಡಿ ಗುಣಮಟ್ಟ ಮತ್ತು ರುಚಿಯನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ಸೂಚನೆ ನೀಡಿದರು.ಶಾಸಕ ಜೆ.ಟಿ.ಪಾಟೀಲ ದೂರವಾಣಿ ಮೂಲಕ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ ಸ್ವಚ್ಛತೆ ಇಲ್ಲ, ಅಲ್ಲಿ ಮಾಡುತ್ತಿರುವ ತಿಂಡಿ ಕಳಪೆಯಾಗಿದ್ದು, ಹೀಗಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಏಜೆನ್ಸಿಯನ್ನು ರದ್ದುಪಡಿಸಬೇಕು. ಉತ್ತಮ ಗುಣಮಟ್ಟದ ಮತ್ತು ಸರಿಯಾದ ತಿಂಡಿಗಳನ್ನು ತಯಾರಿಸುವವರಿಗೆ ಹೊಸದಾಗಿ ಸ್ಥಳೀಯರಿಗೆ ಏಜೆನ್ಸಿ ನೀಡುವಂತೆ ತಿಳಿಸಿದರು.ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಣವೀರಯ್ಯ ಪ್ಯಾಟೀಮಠ ಉಪಸ್ಥಿತರಿದ್ದರು.