ಶಾಸಕ ಶ್ರೀನಿವಾಸ ಮಾನೆ ಅವರ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ೭ ರಕ್ತದಾನ ಶಿಬಿರಗಳಲ್ಲಿ ಹಾಗೂ ಹುಬ್ಬಳ್ಳಿ -ಧಾರವಾಡದ ಎರಡು ಕೇಂದ್ರಗಳಲ್ಲಿ ಏಕಕಾಲಕ್ಕೆ 890 ಜನ ರಕ್ತದಾನ ಮಾಡಿ ದಾಖಲೆ ಬರೆದಿದ್ದಾರೆ.

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಹುಟ್ಟುಹಬ್ಬದ ನಿಮಿತ್ತ ತಾಲೂಕಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ೭ ರಕ್ತದಾನ ಶಿಬಿರಗಳಲ್ಲಿ ಹಾಗೂ ಹುಬ್ಬಳ್ಳಿ -ಧಾರವಾಡದ ಎರಡು ಕೇಂದ್ರಗಳಲ್ಲಿ ಏಕಕಾಲಕ್ಕೆ 890 ಜನ ರಕ್ತದಾನ ಮಾಡಿ ದಾಖಲೆ ಬರೆದಿದ್ದಾರೆ.

ಗುರುವಾರ ಹಾನಗಲ್ಲ ತಾಲೂಕಿನಲ್ಲಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ, ಆಡೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ತಿಳವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಅಕ್ಕಿಆಲೂರಿನ ಸಮುದಾಯ ಆರೋಗ್ಯ ಕೇಂದ್ರ, ಬೊಮ್ಮನಹಳ್ಳಿಯ ವಾಲ್ಮೀಕಿ ಸಮುದಾಯ ಭವನ, ಹೀರೂರಿನ ಸರ್ಕಾರಿ ಪ್ರೌಢಶಾಲೆ, ಬೆಳಗಾಲಪೇಟೆಯ ಶಿವಲಿಂಗೇಶ್ವರ ಸಭಾಭವನ, ಅಲ್ಲದೆ ಹುಬ್ಬಳ್ಳಿಯ ಮರಾಠಾ ಭಾರತೀ ಕಲ್ಯಾಣ ಮಂಟಪ, ಧಾರವಾಡದ ಬಿ.ಡಿ.ಜತ್ತಿ ಹೋಮಿಯೋಪತಿ ಆಸ್ಪತ್ರೆಯಲ್ಲಿಯೂ ಅಭಿಮಾನಿಗಳು ರಕ್ತದಾನ ಮಾಡಿದರು.

ಬೆಳಗಿನ ೯ ಗಂಟೆಯಿಂದಲೇ ಸರದಿಯಲ್ಲಿ ನಿಂತು ರಕ್ತದಾನ ಮಾಡಿದ್ದು ಇನ್ನೊಂದು ವಿಶೇಷ. ೪೫ ಮಹಿಳೆಯರು ರಕ್ತದಾನ ಮಾಡಿದ್ದಲ್ಲದೆ, ೩೦೦ ಜನ ಮೊದಲ ಬಾರಿಗೆ ರಕ್ತದಾನ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ ಮಾನೆ ಅಭಿಮಾನಿ, ಉದ್ಯಮಿ ಆದರ್ಶ ಶೆಟ್ಟಿ ಮತ್ತು ಇದರರು ಅತ್ಯಂತ ಕಡಿಮೆ ಅವಧಿಯಲ್ಲಿ ಇಂಥದ್ದೊಂದು ರಕ್ತದಾನ ಶಿಬಿರ ಆಯೋಜಿಸಲು ತೀರ್ಮಾನಿಸಿದಾಗ ಒಳ್ಳೆಯ ಬೆಂಬಲ ವ್ಯಕ್ತವಾಗಿ, ಈಗ ಅತ್ಯುತ್ತಮ ಫಲಿತಾಂಶ ಸಿಕ್ಕಿದೆ. ಹಾನಗಲ್ಲ ತಾಲೂಕಿನ ಇತಿಹಾಸದಲ್ಲಿ ಇದು ಮೊದಲನೇ ದೊಡ್ಡ ರಕ್ತದಾನ ಶಿಬಿರ. ರಕ್ತದಾನ ಶ್ರೇಷ್ಠ ದಾನ. ನಿಜಕ್ಕೂ ಇದು ಸಂತಸದ ಅಭಿಮಾನದ, ಅಭಿನಂದನೀಯ ಸಂಗತಿ ಎಂದಿದ್ದಾರೆ.

ಶಾಸಕ ಶ್ರೀನಿವಾಸ ಮಾನೆ ಅವರ ಪುತ್ರ ಸೂರಜ ಮಾನೆ ಹಾನಗಲ್ಲಿನ ತಾಲೂಕು ಆಸ್ಪತ್ರೆಯ ರಕ್ತದಾನ ಕೇಂದ್ರದಲ್ಲಿ ತಮ್ಮ 5ನೇ ರಕ್ತದಾನ ಮಾಡಿದರು.

ಶಾಸಕರ ಹುಟ್ಟು ಹಬ್ಬಕ್ಕೆ ಇದು ನಮ್ಮ ಕೊಡುಗೆ. ಜಾತಿ ಭೇದವಿಲ್ಲದೆ ಎಲ್ಲರಿಗೆ ಅನಾರೋಗ್ಯದ ಸಂದರ್ಭದಲ್ಲಿ ರಕ್ತ ಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ನಾವೆಲ್ಲ ಅಭಿಮಾನಿಗಳು ಆಭಿಮಾನವನ್ನು ಒಳಗೊಂಡು ರಕ್ತದಾನ ಮಾಡಿದ್ದೇವೆ. ನಾನು ಈಗ ೫ನೇ ಬಾರಿಗೆ ರಕ್ತ ನೀಡಿದ್ದೇನೆ ಎಂದು ಮಲ್ಲಿಗಾರ ಕಲೀಂ ಮಾಸನಕಟ್ಟಿ ಹೇಳಿದರು.

ರಕ್ತದಾನದ ವಿಷಯದಲ್ಲಿ ಮಾನೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇದು ಒಂದು ಒಳ್ಳೆಯ ದಾಖಲೆ ಸಂದೇಶ, ರಾಜ್ಯದಲ್ಲಿಯೇ ಇದು ಗಣನೀಯ ಇತಿಹಾಸ, ಇಡೀ ತಾಲೂಕಿನಲ್ಲಿ ಅಭಿಮಾನಿಗಳು ಸಂಭ್ರಮದಿಂದ ರಕ್ತದಾನ ಮಾಡಿದ್ದಾರೆ. ಇದೊಂದು ಹೊಸ ಪರಿಪಾಠವೇ ಎನ್ನಬೇಕು. ಇದೆಲ್ಲ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕು ಎಂದು ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ ಹೇಳಿದರು.