ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ₹ 7.20 ಕೋಟಿ ವೆಚ್ಚದ ವಿವಿಧ ರಸ್ತೆ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಶಾಸಕ ಉಮೇಶ ಮೇಟಿ ಚಾಲನೆ ನೀಡಿದರು.ಕ್ಷೇತ್ರ ವ್ಯಾಪ್ತಿಯ ₹ 1 ಕೋಟಿ ವೆಚ್ಚದ ತಾಲೂಕಿನ ಕಿರಸೂರದಿಂದ ಮುಗಳೊಳ್ಳಿ ಪು.ಕೇಂದ್ರ, ಕಡ್ಲಿಮಟ್ಟಿ ರೇಲ್ವೆ ಸ್ಟೇಶನ್ ಬೆನ್ನೂರ ರಸ್ತೆಯಿಂದ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ, ಮುಚಖಂಡಿ ಕ್ರಾಸ್ ರಸ್ತೆಯಿಂದ - ಹರಣ ಶಿಕಾರಿ ಕಾಲೋನಿ ಸರ್ಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ ಮಾರ್ಗವಾಗಿ ಬಸವೇಶ್ವರ ಸರ್ಕಲ್ವರೆಗೆ ರಸ್ತೆ ಸುಧಾರಣೆಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಭಾಗದ ಜನರ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ದಿಗೆ ಕಾರ್ಯ ಕೈಗೊಳ್ಳಲಾಗಿದೆ. ಉತ್ತಮ ರಸ್ತೆ ಗ್ರಾಮಗಳ ಸಮಗ್ರ ಅಭಿವೃದ್ದಿಗೆ ಪೂರಕವಾಗಿದ್ದು, ಸಾರ್ವಜನಿಕರಿಗೆ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು ನಮ್ಮ ಬದ್ದತೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ರಸ್ತೆ ಮಾಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ನಗರಸಭೆ ಸದಸ್ಯೆ ಲಕ್ಷ್ಮೀ ಚೌಹಾನ್, ತಾಲೂಕೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಎಂ.ರಾಂಪೂರ ಸೇರಿ ನಾಗರಾಜ ಹದ್ಲಿ, ಬಲರಾಮ ಪವಾರ್, ಲಕ್ಷ್ಮಣ ದಡ್ಡಿ, ನಿಂಗಪ್ಪ ಕೋಟಿ, ಸಿದ್ದಪ್ಪ ಸುನಗದ, ಸಿದ್ದಪ್ಪ ಕೋಟೆಕಲ್, ರಂಗಪ್ಪ ಮಳ್ಳಿ, ಎಸ್.ಬಿ.ಮಾಚಾ, ಮಂಜು ಮುಚಖಂಡಿ ಹಾಗೂ ಇತರರು ಉಪಸ್ಥಿತರಿದ್ದರು.