ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಎಪಿಎಂಸಿ ಮಾರುಕಟ್ಟೆ ಮುಂಭಾಗದ ರಸ್ತೆ ಹಾಗೂ ಒಳಾಂಗಣದ ರಸ್ತೆಗಳ ಅಭಿವೃದ್ಧಿಗೆ ಮಂಜೂರಾಗಿರುವ 2 ಕೋಟಿ ರು. ಅಂದಾಜು ಮೊತ್ತದ ಕಾಮಗಾರಿಗೆ ಶಾಸಕ ಪಿ. ರವಿಕುಮಾರ್ ಎಪಿಎಂಸಿ ಆರ್ಚ್ ಬಳಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಕಲ್ಲಹಳ್ಳಿ ಎಪಿಎಂಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ ಕೃಷಿ ಮಾರುಕಟ್ಟೆ ಉತ್ಪನ್ನ ಇಲಾಖೆಯಿಂದ 2 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಶಂಭು ಕನ್ಸ್ಟ್ರಕ್ಷನ್ ಅವರಿಗೆ ಗುತ್ತಿಗೆ ನೀಡಲಾಗಿದೆ. ಈ ರಸ್ತೆ ಕಾಮಗಾರಿಗೂ ಮುನ್ನವೇ ಈ ಭಾಗದ ಬಹುದೊಡ್ಡ ಸಮಸ್ಯೆಯಾಗಿದ್ದ ಒಳಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ನಾವು ಬಗೆಹರಿಸಿದ್ದೇವೆ. ಯುಜಿಡಿಗೆ 5 ಕೋಟಿ ರು. ಹಾಗೂ ಕುಡಿಯುವ ನೀರಿನ ಯೋಜನೆಗೆ 12 ಲಕ್ಷ ರು. ಬಿಡುಗಡೆ ಮಾಡಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದರು.

ಈ ಹಿಂದೆ ರಸ್ತೆಗಳು ತೀವ್ರವಾಗಿ ಗುಂಡಿಬಿದ್ದಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ಬಹಳ ತೊಂದರೆಯಾಗುತ್ತಿತ್ತು. ಈ ರಸ್ತೆಯಲ್ಲಿ ಯಾವುದೇ ಒಂದು ಪಕ್ಷದವರಲ್ಲ, ಬದಲಾಗಿ ಎಲ್ಲಾ ಪಕ್ಷದವರೂ, ಸಾರ್ವಜನಿಕರೂ ಸಂಚರಿಸುತ್ತಾರೆ. ಗುಂಡಿಗಳಿಂದ ವಾಹನಗಳು ಪಂಚರ್ ಆಗಬಾರದು ಹಾಗೂ ಓಡಾಡುವ ಸಾರ್ವಜನಿಕರ ಬೆನ್ನುಮೂಳೆಗೆ ಹಾನಿಯಾಗಬಾರದು ಎಂಬ ಏಕೈಕ ಕಾರಣಕ್ಕೆ, ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆಯ 55 ಲಕ್ಷ ರು. ಅನುದಾನ ಬಳಸಿ ತಕ್ಷಣವೇ ರಸ್ತೆಗೆ ಜಲ್ಲಿಕಲ್ಲು ಹಾಕಿ ದುರಸ್ತಿ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಲ್ಲಹಳ್ಳಿ ಹಾಗೂ ವಿ.ವಿ.ನಗರದ ಅಭಿವೃದ್ಧಿ ಕೇವಲ ಈ ರಸ್ತೆಗೆ ಸೀಮಿತವಾಗಿಲ್ಲ. ಈ ಭಾಗದ 4 ಪ್ರಮುಖ ಒಳರಸ್ತೆಗಳ ಅಭಿವೃದ್ಧಿಗಾಗಿ 4.5 ಕೋಟಿ ರು. ವೆಚ್ಚದ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಆ ಕಾಮಗಾರಿಯೂ ಆರಂಭವಾಗಲಿದೆ. ಹಳೇ ಊರು, ಕಲ್ಲಹಳ್ಳಿ ಹಾಗೂ ಹೊಸ ವಿ.ವಿ. ನಗರದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದು, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ನಗರಸಭಾ ಮಾಜಿ ಅಧ್ಯಕ್ಷ ಮಂಜು, ಮಾಜಿ ನಗರಸಭಾ ಸದಸ್ಯ ಕಲ್ಲಹಳ್ಳಿ ಕೆ.ಸಿ.ರವೀಂದ್ರ, ಕಲ್ಲಹಳ್ಳಿಯ ಮುಖಂಡರಾದ ಆನಂದ್ ಮುಖಂಡರಾದ ನಹೀಂ, ರೈಸ್ ಮಿಲ್ ಗೂಳೀಗೌಡ, ಆತ್ಮಣ್ಣ, ಧರ್ಮಶ್ರೀ ಕಲ್ಯಾಣ ಮಂಟಪದ ಶಿವರಾಂ, ಕಾಂಗ್ರೆಸ್ ಮುಖಂಡರಾದ.ಅನುಪ್. ಎಂ.ಎಸ್.ಅಭಿಲಾಷ್, ಮೊದಲಾದವರು ಉಪಸ್ಥಿತರಿದ್ದರು.