ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ವಿರಾಜಪೇಟೆ ವಿಧಾನ ಸಭೆಯ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಕೆ ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಕೊಲ್ಲಿ ಹಾಡಿಗೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿದರು.ಈ ಹಿಂದೆ ಅರಣ್ಯ ಇಲಾಖೆಯ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳಿಂದ ಈ ಹಾಡಿಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಅರಣ್ಯ ನಿವಾಸಿಗಳು, ತಾವು ವಾಸಿಸುವ ಜಾಗದ ಬಗ್ಗೆ ತಮ್ಮ ಹಕ್ಕನ್ನು ಇಲಾಖೆ ಹಾಗೂ ಸರ್ಕಾರದೊಂದಿಗೆ ಪ್ರತಿಪಾದಿಸಿದರು. ಈ ಕುರಿತು ಇನ್ನೂ ತೀರ್ಮಾನವಾಗದಿದ್ದರೂ ಕೆಲವು ನಿವಾಸಿಗಳು ಆತಂಕಗೊಂಡಿರುವುದನ್ನು ಅರಿತ ಶಾಸಕರು, ಇಂದು ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಭರವಸೆಯನ್ನು ನೀಡಿದರು.ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಅರಣ್ಯ ನಿವಾಸಿಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಅತಿ ಶೀಘ್ರದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಈ ಸಮಸ್ಯೆ ಸರ್ಕಾರ ಮಟ್ಟದಲ್ಲಿ ಇತ್ಯರ್ಥ ಆಗುವ ತನಕ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಅರಣ್ಯ ನಿವಾಸಿಗಳು ಸಹ, ತಾವು ಈಗ ವಾಸಿಸುತ್ತಿರುವ ವಿವಾದಿತ ಜಾಗದಲ್ಲಿ ಯಾವುದೇ ರೀತಿಯ ಹೊಸ ನಿರ್ಮಾಣ ಕಾರ್ಯಕ್ಕೆ ಮುಂದಾಗದಂತೆ ಕಿವಿಮಾತು ಹೇಳಿದರು. ಹೊರಗಿನವರ ಪ್ರವೇಶದ ಬಗ್ಗೆಯೂ ಜಾಗರೂಕರಾಗಿರುವಂತೆ ನಿವಾಸಿಗಳನ್ನು ಕೇಳಿಕೊಂಡರು. ರಾಜ್ಯ ಅರಣ್ಯ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಮೋಹನ್, ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಿಮ್ಮಣಮಾಡ ರವಿ, ಕಟ್ಟಿ ಕಾರ್ಯಪ್ಪ, ಪಲ್ವಿನ್ ಪೂಣಚ್ಚ, ಕೆ.ಬಾಡಗ ಪಂಚಾಯಿತಿ ಅಧ್ಯಕ್ಷರಾದ ರಿತೀಶ್, ಅಜ್ಜಿಕುಟ್ಟಿರ ಗಿರೀಶ್, ಅರಣ್ಯ, ಪೊಲೀಸ್, ಐಟಿಡಿಪಿ ಇಲಾಖೆಯ ಅಧಿಕಾರಿಗಳು, ಹಾಡಿ ಮುಖಂಡರು ಹಾಗು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.