ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಬಗ್ಗೆ ಶೀಘ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.ತಾಲೂಕಿನ ಕೆಸ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆ ಸಮಸ್ಯೆ ಕುರಿತಂತೆ ಸಾರ್ವಜನಿಕರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಕೆಸ್ತೂರು, ಕೆ.ಹೊನ್ನಲಗೆರೆ, ಬೆಸಗರಹಳ್ಳಿ ಮತ್ತು ಕೆ.ಎಂ.ದೊಡ್ಡಿ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ವೈದ್ಯರ ಕೊರತೆ ಇರುವುದು ನನ್ನ ಗಮನಕ್ಕೆ ಬಂದಿದೆ ಎಂದರು.ಕ್ಷೇತ್ರ ವ್ಯಾಪ್ತಿಯ ಹತ್ತಾರುಹಳ್ಳಿಗಳ ಜನರು ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಲು ತೊಂದರೆಯಾಗಿರುವುದು ಸಾರ್ವಜನಿಕರ ಸಾಮಾನ್ಯ ದೂರಾಗಿದೆ. ವೈದ್ಯರ ಸಮಸ್ಯೆ ಕುರಿತಂತೆ ತಾವು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಶೀಘ್ರ ಭೇಟಿ ಮಾಡಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಮದ್ದೂರು ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಸಂಬಂಧ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಆ ನಂತರ ಆಸ್ಪತ್ರೆಗೆ ಎಲ್ಲಾ ರೀತಿಯ ತಜ್ಞ ವೈದ್ಯರು ನೇಮಕ ಮಾಡಲು ಕ್ರಮ ವಹಿಸುವುದಾಗಿ ಆಶ್ವಾಸನೆ ನೀಡಿದರು.
ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ.ರವಿಶಂಕರ್, ಡಾ.ನಿಸರ್ಗ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸಿ.ಚೆಲುವರಾಜು, ಮನ್ಮುಲ್ ನಿರ್ದೇಶಕ ಎಂ.ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ದಾಸೇಗೌಡ, ಗೋವಿಂದೇಗೌಡ, ಮತ್ತಿತರರು ಇದ್ದರು.ಇಂದಿನಿಂದ ತುಂಬಕೆರೆಯಲ್ಲಿ ಸಮುದಾಯ ಜೀವನ ಶಿಬಿರ
ಕನ್ನಡಪ್ರಭ ವಾರ್ತೆ, ಮಂಡ್ಯಎಸ್.ಬಿ.ಎಜುಕೇಷನ್ ಟ್ರಸ್ಟ್ನ ಮಾಂಡವ್ಯ ಶಿಕ್ಷಣ ಮಹಾಹಾವಿದ್ಯಾಲಯದಿಂದ ತಾಲೂಕಿನ ತುಂಬಕೆರೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಮೇ ೨೦ರಿಂದ ಮೂರು ದಿನಗಳ ಕಾಲ ಸಮುದಾಯ ಜೀವನ ಶಿಬಿರವನ್ನು ಆಯೋಜಿಸಲಾಗಿದೆ.ಮೇ ೨೦ರಂದು ಬೆಳಗ್ಗೆ ೧೧ ಗಂಟೆಗೆ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ವಹಿಸುವರು. ಎಸ್ಬಿಇಟಿ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಕೆ.ಎಂ.ದೊಡ್ಡಿ ಭಾರತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಲ್.ಸುರೇಶ್, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲೆ ಎಂ.ಸಿ.ಚೇನಾ, ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಪಿ.ಸುಮಾರಾಣಿ ಉಪಸ್ಥಿತರಿರುವರು.ಮಧ್ಯಾಹ್ನ ೩ ಗಂಟೆಗೆ ಹಠಾತ್ ಹೃದಯ ಸ್ತಂಭನ ಮತ್ತು ಸಿಪಿಆರ್ ಕುರಿತು ಹೃದ್ರೋಗ ತಜ್ಞೆ ಡಾ.ಹೇಮಾ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಸಹಾಯಕ ಪ್ರಾಧ್ಯಾಪಕ ಎಂ.ಆರ್.ರಾಮಾರಾಧ್ಯ ವಹಿಸುವರು.
ಸಂಜೆ ೫ ಗಂಟೆಗೆ ಆಟೋಟ ಕಾರ್ಯಕ್ರಮಗಳು ೬ ಗಂಟೆಗೆ ಶಿಂಷಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ ೨೧ರಂದು ಬೆಳಗ್ಗೆ ೧೧ ಗಂಟೆಗೆ ಅಗ್ನಿ ಅವಘಡ ಅರಿವು ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ ಪ್ರಾತ್ಯಕ್ಷಿಕೆ ನಡೆಸಿಕೊಡುವರು. ಶಿಕ್ಷಣ ಮತ್ತು ಕಲೆ ಬಗ್ಗೆ ಕರ್ನಾಟಕ ಪಬ್ಲಿಕ್ ಶಾಲೆಯ ಚಿತ್ರಕಲಾ ಶಿಕ್ಷಕ ಡಿ.ಎನ್.ವೆಂಕಟೇಶ್ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಸಹಾಯಕ ಪ್ರಾಧ್ಯಾಪಕಿ ನಾಗರತ್ನಮ್ಮ ವಹಿಸುವರು. ಸಂಜೆ ೬ ಗಂಟೆಗೆ ಕಪಿಲಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಮೇ ೨೨ರಂದು ಬೆಳಗ್ಗೆ ೧೧ ಗಂಟೆಗೆ ಸಮಾರೋಪ ಸಮಾರಂಭ ಏರ್ಪಡಿಸಿದ್ದು, ಅಧ್ಯಕ್ಷತೆಯನ್ನು ಎಸ್ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ವಹಿಸುವರು. ಮಾಂಡವ್ಯ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಕೆ.ಮಹೇಶ್ ಸಮಾರೋಪ ಭಾಷಣ ಮಾಡುವರು. ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ಪ್ರಾಂಶುಪಾಲೆ ಡಾ.ಪಿ.ಸುಮಾರಾಣಿ ಉಪಸ್ಥಿತರಿರುವರು. ಸಂಜೆ ೩ ಗಂಟೆಗೆ ಕಾವೇರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.