ಸಾರಾಂಶ
- ಶಾಸಕರು 2 ತಾಸು ಕಾದರೂ ಹಾಜರಿ ಹಾಕಿ ಹೋಗಿದ್ದ ಕಾರ್ಯಕರ್ತೆ ಬರಲೇ ಇಲ್ಲ!
- ಸೂಕ್ತ ಕ್ರಮಕ್ಕೆ ಮಹಿಳಾ ಇಲಾಖೆ ಉಪನಿರ್ದೇಶಕರಿಗೆ ದೂರವಾಣಿಯಲ್ಲೇ ಸೂಚನೆ- ಅಂಗನವಾಡಿ ಕಾರ್ಯಕರ್ತೆ ನಿರ್ಲಕ್ಷ್ಯ ವಿರುದ್ಧ ಸಹಾಯಕಿಗೆ ಶಾಸಕ ತರಾಟೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಇಲ್ಲ. ಬೆಳಗ್ಗೆ ಮಕ್ಕಳು ಬಂದರೂ ಹಾಜರಿ ಹಾಕಿಲ್ಲ. ಕಾರ್ಯಕರ್ತೆ ಬೆಳಗ್ಗೆ ಮಕ್ಕಳಿಗೆ ಊಟ ಕೊಟ್ಟು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೊರಗೆ ಹೋಗಿದ್ದರು. ಇದನ್ನು ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಗರಂ ಆದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೋಲ್ಕುಂಟೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಮಕ್ಕಳಿಗೆ ಕೊಡುವ ಊಟ, ಆಹಾರ ಧಾನ್ಯ ದಾಸ್ತಾನು, ಮಕ್ಕಳ ಸಂಖ್ಯೆಯನ್ನು ಪರಿಶೀಲಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆ ಹಾಜರಿ ಹಾಕಿ ಹೊರಹೋಗಿದ್ದರು. ಶಾಸಕರು ಕಾರ್ಯಕರ್ತೆ ಬರುವವರೆಗೂ ಕೇಂದ್ರದಲ್ಲಿ ಎರಡು ತಾಸು ಕಾದರು. ಆದರೂ ಕಾರ್ಯಕರ್ತೆ ಬರಲಿಲ್ಲ. ಇದರಿಂದ ಅಂಗನವಾಡಿಯ ಸಹಾಯಕಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇದ್ದರೂ ಹಾಜರಿ ಹಾಕಿಲ್ಲ. ಮಕ್ಕಳಿಗೆ ತಿಳಿದಷ್ಟು ಆಹಾರ ಕೊಡಲಾಗುತ್ತಿದೆ. ಆಹಾರ ಧಾನ್ಯ ಸರಿಯಾಗಿ ವಿತರಣೆ ಆಗುತ್ತಿಲ್ಲ. ಅಲ್ಲದೇ, ಸಣ್ಣ ಮಕ್ಕಳು ಕೇಂದ್ರದ ಹೊರಗಡೆ ಆಟ ಆಡುತ್ತಿದ್ದವು. ಪೋಷಕರು ಇವರನ್ನು ನಂಬಿ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಶಾಸಕರು ಪ್ರಶ್ನಿಸಿದರು.ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕ ಬಸವಂತಪ್ಪ ಅವರು, ಅಂಗನವಾಡಿ ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಸಂಬಂಧಿಸಿದ ಕಾರ್ಯಕರ್ತೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆಯೂ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ, ಚಂದ್ರಪ್ಪ, ಅಣ್ಣಪ್ಪ, ಮಂಜಪ್ಪ, ಬಸಣ್ಣ, ಮುಖ್ಯಶಿಕ್ಷಕ ಚಂದ್ರಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.- - - ಬಾಕ್ಸ್ * ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಶಿಕ್ಷಣದ ಗುಣಮಟ್ಟ ಪರಿಶೀಲಿಸಿದರು. ಸೆ.25ರಿಂದ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆ ಮತ್ತು ಬಾಳೆಹಣ್ಣು ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಯಾವುದೇ ರೀತಿ ಮಕ್ಕಳಿಗೆ ತೊಂದರೆ ಆಗದಂತೆ ಪ್ರತಿನಿತ್ಯ ಮೊಟ್ಟೆ, ಬಾಳೆಹಣ್ಣು ಕೊಡಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು.
ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸಿದ್ದು, ಶಿಕ್ಷಕರು ಮಕ್ಕಳ ಹಾಜರಾತಿ ಹೆಚ್ಚಳ ಮಾಡಬೇಕು. ಯಾವುದೇ ಕಾರಣಕ್ಕೂ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರಿಗೆ ಶಿಕ್ಷಣ ಕೊಡುವ ಕೆಲಸ ಶಿಕ್ಷಕರು ಮಾಡಬೇಕೆಂದು ತಾಕೀತು ಮಾಡಿದರು.- - - -24ಕೆಡಿವಿಜಿ35, 36, 37ಃ:
ಮಾಯಕೊಂಡ ಕ್ಷೇತ್ರದ ಕೋಲ್ಕುಂಟೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.