ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಬಳಿ ಸಣ್ಣ ನೀರಾವರಿ ಇಲಾಖೆಯ 2.25 ಕೋಟಿ ರು. ಅನುದಾನದಗಲ್ಲಿ ದಡ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಉಡುಪಿ: ಇಲ್ಲಿನ ಮೂಡು ಪೆರಂಪಳ್ಳಿ ವಾರ್ಡಿನ ಶೀಂಬ್ರ ಮಹಾಗಣಪತಿ ದೇವಸ್ಥಾನದ ಬಳಿ ಸಣ್ಣ ನೀರಾವರಿ ಇಲಾಖೆಯ 2.25 ಕೋಟಿ ರು. ಅನುದಾನದಗಲ್ಲಿ ದಡ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ಸಾವಿರಾರು ಭಕ್ತರು ತೀರ್ಥಸ್ನಾನಕ್ಕೆ ಆಗಮಿಸುವ ಶೀಂಬ್ರ ಮಹಾಗಣಪತಿ ದೇವಸ್ಥಾನದ ಸ್ನಾನಘಟ್ಟ ಕಳೆದ ಎರಡು ವರ್ಷದ ಹಿಂದೆ ತೀವ್ರ ನದಿ ಕೊರೆತದಿಂದ ಕೊಚ್ಚಿ ಹೋಗಿ ಭಕ್ತಾದಿಗಳಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ತಕ್ಷಣ ಕಾಮಗಾರಿ ನಡೆಸಿ ಶಾಶ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸಂರಕ್ಷಣಾ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಶೀಂಬ್ರ ಮಹಾಗಣಪತಿ ದೇವಸ್ಥಾನದ ಪ್ರಮುಖರಾದ ಇಂಜಿನಿಯರ್ ಕೆ.ರಮೇಶ್ ರಾವ್ ಮಾತನಾಡಿ, ದೇವಸ್ಥಾನಕ್ಕೆ ತೀರ ಅಪಾಯಕಾರಿಯಾಗಿ ನದಿ ಕೊರೆತದಿಂದ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಭೇಟಿ ನೀಡಿದ್ದ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಇದೀಗ ಕಾಮಗಾರಿಗೆ ಅನುದಾನ ಒದಗಿಸಿ ಸಂರಕ್ಷಣ ಕಾಮಗಾರಿ ಆರಂಭಿಸುವ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖ ಬೇಡಿಕೆ ಈಡೇರಿಸಿದ್ದಾರೆ ಎಂದರು.ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಮಾತನಾಡಿ, ಶಾಸಕ ಯಶ್ಪಾಲ್ ಸುವರ್ಣರ ಮುತುವರ್ಜಿಯಿಂದ ಸ್ನಾನ ಘಟ್ಟ ಕಾಮಗಾರಿ ಆರಂಭಗೊಂಡಿದ್ದು, ದೇವಸ್ಥಾನದ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ನಡೆಸಿ ಭಕ್ತರಿಗೆ ಅನುಕೂಲ ಕಲ್ಪಿಸಿದ ಶಾಸಕರಿಗೆ ಭಕ್ತರ ಪರವಾಗಿ ಧನ್ಯವಾದ ಸಲ್ಲಿಸಿದರು.
ದೇವಳದ ಅರ್ಚಕ ನವೀನ್ ಶಿವತ್ತಾಯ, ಸ್ಥಳೀಯ ನಗರಸಭಾ ಸದಸ್ಯೆ ಅನಿಟ ಡಿಸೋಜ, ಆರ್ಕಿಟೆಕ್ಟ್ ರಾಜೇಂದ್ರ ಮಯ್ಯ, ನಗರಸಭೆ ಮಾಜಿ ಸದಸ್ಯ ಪ್ರಶಾಂತ್ ಭಟ್ , ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪ್ರಮುಖರಾದ ಡೆನಿಸ್ ಮಸ್ಕರೇನಸ್ , ಶಶಾಂಕ್ ಶಿವತ್ತಾಯ , ವಿಜಯ ಪೂಜಾರಿ, ಸಂತೋಷ್ ಅಮೀನ್, ಸುಮ, ಯಶೋಧರ್ ಅಮೀನ್, ಲೀನಾ, ರಂಜಿತ್, ಸತೀಶ್, ಶೆರ್ಲಿನ್ ಮತ್ತಿತರರಿದ್ದರು.