ಸಾರಾಂಶ
ಕೆಎಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಕೆಎಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಬಡ ಕುಟುಂಬಗಳಿಂದ ಬಂದು, ಜೀವನದಲ್ಲಿ ಸಾಧಿಸಬೇಕೆಂಬ ಛಲ, ಹುಮ್ಮಸ್ಸಿನಿಂದ ಬೇರೆ ಉದ್ಯೋಗದಲ್ಲಿದ್ದುಕೊಂಡು ಓದಿಕೊಳ್ಳುತ್ತಿರುವ ಪರೀಕ್ಷಾರ್ಥಿಗಳ ಪರ ಇರಬೇಕಾದ ಸರ್ಕಾರ, ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ. ಗಾಯಕ್ಕೆ ಬರೆ ಇಟ್ಟಂತೆ, ಅಭ್ಯರ್ಥಿಗಳು ಬರಬೇಕಾದ ಊರುಗಳಿಂದ ದೂರದೂರುಗಳಿಗೆ ಪರೀಕ್ಷಾ ಕೇಂದ್ರ ನಿಗದಿ ಮಾಡಿರುವ ತರ್ಕ ಏನೆಂದು ಸರ್ಕಾರವೇ ಬಿಡಿಸಿ ಹೇಳಬೇಕು. ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇಡುವ ಒಂದು ಪ್ರತೀತಿಯನ್ನು ಬದಲಿಸಿ, ವಾರದ ದಿನ ಪರೀಕ್ಷೆಯನ್ನಿಟ್ಟಿರುವುದು ಖಾಸಗಿ, ಐಟಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನು, ದೂರದೂರುಗಳಿಗೆ ಹೋಗಬೇಕಾದವರು ಒಂದು ದಿನ ಮುಂಗಡವಾಗಿ ಹೋಗಬೇಕು. ಒಂದು ಪರೀಕ್ಷೆ ಬರೆಯುವುದಕ್ಕೆ ಎರಡು ದಿನ ರಜೆ ಪಡೆಯುವಂತಹ ಅವೈಜ್ಞಾನಿಕ ವೇಳಾಪಟ್ಟಿ ಮಾಡಿರುವುದು ಪ್ರಶ್ನಾರ್ಹ ಹಾಗೂ ಅತಾರ್ಕಿಕವಾಗಿದೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರದ ಕೂಪವಾಗಿರುವ ಲೋಕ ಸೇವಾ ಆಯೋಗಕ್ಕೆ ಯೋಗ್ಯ, ಸಮರ್ಥ, ದಕ್ಷ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಿ ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಲಿ ಎಂದು ಯತ್ನಾಳ ಒತ್ತಾಯಿಸಿದ್ದಾರೆ.