ಸಾರಾಂಶ
- ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ, ವಿಶ್ವ ಹಿಂದೂಪರಿಷತ್ - ಬಜರಂಗದಳದಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನಸಿಂಹರಾಜಪುರವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರವನ್ನು ಮರೆಮಾಚಲು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಬಜರಂಗದಳದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಎನ್.ನಾಗೇಶ್ ಆರೋಪಿಸಿದರು.ಶನಿವಾರ ಸಂಜೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ವಿಶ್ವಹಿಂದೂ ಪರಿಷತ್ ,ಬಜರಂಗದಳದಿಂದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ನವರು ವಿಧಾನ ಸೌಧದಲ್ಲಿ ನಮ್ಮ ವೈರಿ ರಾಷ್ಟ್ರದ ಪರವಾಗಿ ಘೋಷಣೆ ಕೂಗುತ್ತಾರೆ. ಅದನ್ನು ಕೇಳಿಯೂ ಕೇಳದಂತೆ ಸರ್ಕಾರ ಕಿವುಡಾಗಿದೆ. ತನಿಖೆಯಲ್ಲೂ ದೇಶ ವಿರೋಧಿ ಘೋಷಣೆ ಕೂಗಿದ್ದು ಸಾಬೀತಾದರೂ ಘೋಷಣೆ ಕೂಗಿದವರನ್ನು ಸರ್ಕಾರ ಬಂಧಿಸಿಲ್ಲ. ಸರ್ಕಾರದ ವೈಫಲ್ಯ ಮರೆಮಾಚಲು ಶೃಂಗೇರಿ ಕ್ಷೇತ್ರದಲ್ಲಿ ಸ್ಥಳೀಯವಾಗಿ ನಡೆದ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಶಾಸಕರು ಬಜರಂಗದಳ ವಿರುದ್ಧ ಸುಳ್ಳು ಆರೋಪಮಾಡಿದ್ದರು .
ತಾವೂ ಎಲ್ಲಾ ಸಮುದಾಯಕ್ಕೂ ಸೇರಿದವರು ಎಂಬುದನ್ನು ಶಾಸಕರು ಅರಿತುಕೊಳ್ಳಬೇಕು. ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಈ ಬಗ್ಗೆ ಸದನದಲ್ಲಿ ಚರ್ಚಿಸಲು ವಿಫಲವಾಗಿದ್ದಾರೆ. ಪಾಕಿಸ್ಥಾನದ ಪರ ಘೋಷಣೆ ಕೂಗಿ ದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದಿದ್ದರೆ ಉಗ್ರಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ತಾಲೂಕು ಬಿಜೆಪಿ ಘಟಕ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಶಾಸಕರು ಸದನದಲ್ಲಿ ಸಂಘ ಪರಿವಾರದ ಹೆಸರು ಎತ್ತಿರುವುದು ಖಂಡನೀಯ. ವಿರೋಧಿ ದೇಶದ ಮಿತ್ರರನ್ನು ಬಜಾವ್ ಮಾಡಲು ಹೊರಟ ಸರ್ಕಾರದ ನಿಲುವು ಬಿಜೆಪಿ ಪಕ್ಷ ಖಂಡಿಸುತ್ತದೆ. ಕ್ಷೇತ್ರದಲ್ಲಿ ಸೌಹಾರ್ದತೆ ಇರಬೇಕೆನ್ನುವ ಶಾಸಕರು ಕೇವಲ ಹಿಂದುಗಳ ವಿರುದ್ಧ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.ತಾಲೂಕು ವಿಶ್ವಹಿಂದೂ ಪರಿಷತ್ ಘಕಟದ ಅಧ್ಯಕ್ಷ ಕಣಿವೆ ಸತ್ಯನಾರಾಯಣ ಮಾತನಾಡಿ, ಶಾಸಕರನ್ನು ಸದನದಲ್ಲಿ ಸಂಘ ಪರಿವಾರದ ಹೆಸರನ್ನು ಪ್ರಸ್ತಾಪಿರುವ ಬಗ್ಗೆ ಸ್ವೀಕರ್ಗೆ ದೂರು ನೀಡಲು ತೀರ್ಮಾನಿಸಿದ್ದೇವೆ ಎಂದರು.ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ದಯಾನಂದ್, ವಿಶ್ವಹಿಂದೂಪರಿಷತ್ ಮುಖಂಡ ಪುರುಷೋತ್ತಮ ಕೂಸ್ಗಲ್, ಮಾಂತೇಜ್, ಬಿಜೆಪಿ ಮುಖಂಡರಾದ ಅಶ್ವನ್, ಲೋಕೇಶ್, ಶ್ರೀನಾಥ್, ಎ.ಬಿ.ಮಂಜುನಾಥ್, ಪ್ರವೀಣ್, ನಾಗರಾಜ್, ವಿನಯಕುಮಾರ್ ಮತ್ತಿತರರಿದ್ದರು. ಮಾನವ ಸರಪಣಿ ನಿರ್ಮಿಸಿ ಶಾಸಕರ ವಿರುದ್ಧ ಘೋಷಣೆ ಕೂಗಲಾಯಿತು.