ಸಾರಾಂಶ
ಕೊಳ್ಳೇಗಾಲ: ಇಲ್ಲಿನ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಜನಾನುರಾಗಿ ರಾಜಕಾರಣಿ, ಅಭಿವೃದ್ಧಿ ಪರ ಚಿಂತನೆಯುಳ್ಳವರು, ಎಲ್ಲಾ ಜನಾಂಗಗಳ ಬಗ್ಗೆಯೂ ಅಪಾರ ಕಾಳಜಿಯುಳ್ಳರಾಗಿದ್ದು ನಮ್ಮ ಸಮಾಜವನ್ನು ಗುರುತಿಸಿ ನಗರಸಭೆಗೆ ನನ್ನನ್ನು ನಾಮನಿರ್ದೇಶನ ಮಾಡಿರುವುದು ಸಂತಸ ತಂದಿದೆ ಎಂದು ನೂತನ ನಾಮನಿರ್ದೇಶನ ಸದಸ್ಯ ದೇವಾನಂದ್ ಹೇಳಿದರು.ಪಟ್ಟಣದ ರೋಟರಿ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕ್ರೈಸ್ತ ಸಮಾಜದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಾಸಕರು ನಗರಸಭೆಗೆ ನನ್ನನ್ನು ನೇಮಿಸಿದ್ದು ಸಂತಸದ ಜೊತೆಗೆ ಜವಾಬ್ದಾರಿ ಹೆಚ್ಚಿದೆ. ಸಮಾಜದ ಬಂಧುಗಳ ಸಹಕಾರ ಪಡೆದು ಪ್ರಾಮಾಣಿಕವಾಗಿ ನನ್ನ ಕೈಲಾದ ಜನಪರ ಕೆಲಸ ಮಾಡುವೆ ಎಂದರು. ಈ ವೇಳೆ ಕ್ರೈಸ್ತ ಸಮಾಜದ ಹಿರಿಯ ಮುಖಂಡ ಸೆಲ್ವರಾಜು ಮಾತನಾಡಿ, ಯುವ ಮುಖಂಡ ದೇವಾನಂದರನ್ನು ಗುರುತಿಸಿ ಕೊಳ್ಳೇಗಾಲ ಶಾಸಕರು ಅವರಿಗೆ ಸ್ಥಾನ, ಮಾನ ನೀಡಿರುವುದು ಹೆಮ್ಮೆಯ ವಿಚಾರ, ಅವರಿಗೆ ಸಭೆ ಮೂಲಕ ಅಭಿನಂದನೆ ಸಲ್ಲಿಸುವೆ ಎಂದರು. ಕ್ರೈಸ್ತ ಸಮುದಾಯ ಕ್ಷೇಮಾಭಿವೃದ್ಧಿ ಒಕ್ಕೂಟ ಇದುವರೆಗೂ ಬಡಜನರಿಗೆ ಸಾಕಷ್ಟು ರೀತಿ ಸೇವೆ ಸಲ್ಲಿಸುತ್ತಾ ಬಂದಿದೆ. ಅದೇ ರೀತಿ ಮೇ ತಿಂಗಳ ಮೊದಲನೇ ವಾರದಲ್ಲಿ ಪಟ್ಟಣದಲ್ಲಿ ಬೃಹತ್ ಆರೋಗ್ಯ ಶಿಬಿರ ನಡೆಸಲು ನಿರ್ಣಯಿಸಲಾಗಿದೆ. ಶಿಬಿರ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು, ಪಟ್ಟಣದ ಸಮಸ್ತ ಜನತೆಗೆ ಶಿಬಿರದಲ್ಲಿ ಪಾಲ್ಗೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಕ್ರೈಸ್ತ ಸಮುದಾಯ ಕ್ಷೇಮಾಭಿವೃದ್ಧಿ ಒಕ್ಕೂಟದ ಗೌರವಾಧ್ಯಕ್ಷ ವಿನ್ಸೆಂಟ್, ಹಿರಿಯ ಉಪಾಧ್ಯಕ್ಷರು ಟಿ.ಜಾನ್ ಪೀಟರ್, ಉಪಾಧ್ಯಕ್ಷ ಬಸವರಾಜು, ಪ್ರಧಾನ ಕಾರ್ಯದರ್ಶಿ ಮುತ್ತುಕುಮಾರ್, ಕಾರ್ಯದರ್ಶಿ ಸದಾನಂದ ಸಾಧು, ಸಭಾ ಹಿರಿಯರು ಕರುಣಾಕರ್, ನಿರ್ದೇಶಕ ಭಕ್ತರಾಜ್ ಇನ್ನಿತರಿದ್ದರು.