ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣದ ಹೃದಯ ಭಾಗದ ಐತಿಹಾಸಿಕ ಜೋಡಿ ಕೆರೆಗಳ ಅಭಿವೃದ್ಧಿ ಮತ್ತು ಭಾಗೀರಥಿ ನಾಲಾ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿದ್ದು, ಶನಿವಾರ ಶಾಸಕ ಲಕ್ಷ್ಮಣ ಸವದಿ ಆಕಸ್ಮಿಕ ಭೇಟಿ ನೀಡಿ ಜೋಡಿಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.

ಈ ವೇಳೆ ಶಾಸಕ ಲಕ್ಷ್ಮಣ ಸವದಿ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರನಿಗೆ ತರಾಟೆಗೆ ತೆಗೆದುಕೊಂಡು ಆಡಳಿತ ಸದಸ್ಯರಿಗೂ ಚುರುಕು ಮುಟ್ಟಿಸಿದರು. ಪಟ್ಟಣದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಜೋಡಿ ಕೆರೆಗಳನ್ನು ಸುಂದರವಾಗಿ ಅಭಿವೃದ್ಧಿ ಪಡಿಸಲು ಮತ್ತು ನಾಲಾ ಅಭಿವೃದ್ಧಿಪಡಿಸಲು ₹ 25 ಕೋಟಿ ಅನುದಾನವನ್ನು ಪುರಸಭೆಗೆ ಒದಗಿಸಲಾಗಿದೆ. ಈ ಅನುದಾನವನ್ನ ಸದ್ಬಳಕೆ ಮಾಡಿಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕಾದ ಆಡಳಿತ ಮಂಡಳಿಯ ಸದಸ್ಯರು ಮತ್ತು ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದೀರಿ, ಶೀಘ್ರದಲ್ಲಿಯೇ ಮಳೆಗಾಲ ಆರಂಭವಾಗಲಿದೆ. ಮೊದಲ ಹಂತದ ಕಾಮಗಾರಿಯನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು.

ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ದತ್ತಾ ವಾಸ್ಟರ್, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬುಟಾಳಿ, ಸಂತೋಷ ಸಾವಡಕರ, ರಾಜಶೇಖರ ಗುಡ್ಡೂಡಗಿ, ಕಲ್ಲೇಶ ಮಡ್ಡಿ, ರಾಜು ಬುಲಬುಲೆ, ಬೀರಪ್ಪ ಯಕ್ಕಂಚಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.