ದಾಬಸ್‍ಪೇಟೆ: ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ ಸಾಂಸ್ಕ್ರತಿಕ, ಶಿಕ್ಷಣ, ಧಾರ್ಮಿಕ ಸಾಮಾಜಿಕ ಸೇವೆಗೆ ಆದ್ಯತೆ ನೀಡುತ್ತಿರುವ ಶಾಸಕರಾದ ಎನ್.ಶ್ರೀನಿವಾಸ್ ಕಾರ್ಯವೈಖ್ಯರಿ ಶ್ಲಾಘನೀಯವಾದುದು ಎಂದು ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ತಿಳಿಸಿದರು.

ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಬಂಡೆಮಠದಲ್ಲಿ ನೆಲಮಂಗಲ ಉತ್ಸವದ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಅಧಿಕಾರದ ಅವಕಾಶ ದೊರೆತಾಗ ಜನರು ಶಾಶ್ಚತವಾಗಿ ನೆನೆಪಿಸಿಕೊಳ್ಳುವ ಕೆಲಸಗಳನ್ನು ಮಾಡಿದರೆ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಶಾಸಕ ಶ್ರೀನಿವಾಸ್ ಮೊದಲ ಸಲ ಆಯ್ಕೆಯಾಗಿ ಹಲ ಶಾಸಕರು, ಸಚಿವರು ಈಡೇರಿಸದ ನಮ್ಮ 47 ವರ್ಷಗಳಿಂದ ಸಮಸ್ಯೆಯಾಗಿದ್ದ ಸೋಲೂರು ಹೋಬಳಿಯನ್ನು ಮಾಗಡಿ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿ ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಅದಲ್ಲದೆ ಸೋಲೂರು ಹೋಬಳಿಗೆ 50 ಕೋಟಿ ವೆಚ್ಚದಲ್ಲಿ ಕಾವೇರಿ ನೀರು ಹರಿಸುವ ಯೋಜನೆ, ನೆಲಮಂಗಲ ಪಟ್ಟಣಕ್ಕೆ ಒಳಚರಂಡಿ 220 ಕೆವಿ ವಿದ್ಯುತ್ ಉಪಸ್ಥಾವರ ಸೇರಿದಂತೆ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ತಂದಿದ್ದಾರೆ ಎಂದರು.

ಶಾಸಕ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿದ್ದು, ನೆಲಮಂಗಲ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ. ನಾನು ಗೆಲುವು ಸಾಧಿಸಿ ಮೂರು ವರ್ಷವಾಗಿದೆ. ಕ್ಷೇತ್ರದ ಮಹಿಳೆಯರನ್ನು ನೇರವಾಗಿ ಭೇಟಿಮಾಡಿ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಅವರ ಕಷ್ಟ ಸುಖಗಳನ್ನು ಹತ್ತಿರದಿಂದ ಆಲಿಸಲು ಹಾಗೂ ಮಹಿಳೆಯರನ್ನು ಉತ್ತೇಜಿಸಲು ರಂಗೋಲಿ ಸ್ಪರ್ಧೆ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಬಹುಮಾನ ಸೇರಿದಂತೆ ಎಲ್ಲರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಟ್ಟಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಗಂಗರೇವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರುದ್ರಶರ್ಮಾ, ಗ್ರಾ.ಪಂ.ಮಾಜಿ ಸದಸ್ಯ ಹನುಮಂತರಾಯಪ್ಪ, ಕಾಚನಹಳ್ಳಿ ಮನು ಸೇರಿದಂತೆ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.


ಪೋಟೋ 1 :

ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಬಂಡೆಮಠದಲ್ಲಿ ನೆಲಮಂಗಲ ಉತ್ಸವ ಅಂಗವಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಹಾಗೂ ಶಾಸಕ ಎನ್.ಶ್ರೀನಿವಾಸ್ ಬಹುಮಾನ ವಿತರಿಸಿದರು.