ಕನ್ನಡಪ್ರಭ ವಾರ್ತೆ ಇಳಕಲ್ಲ

ಬಾಗಲಕೋಟೆ, ಹುನಗುಂದ, ಇಳಕಲ್ಲ, ಕುಷ್ಟಗಿ, ಬಾದಾಮಿ, ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಳವಡಿಸಲಾದ ಏರಟೆಲ್ ಕಂಪನಿಯ ಮೊಬೈಲ್ ಟವರ್‌ಗಳಿಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಟವರ್‌ ನ ಬ್ಯಾಟರಿಗಳು ಪದೇ ಪದೇ ಕಳುವಾಗುತ್ತಿದ್ದವು. ಇದರ ನಿರ್ವಹಿಸಿದ್ದ ಇಂಡಸ್ ಕಂಪನಿಯ ಮ್ಯಾನೇಜರ್ ಮತ್ತು ಏಜೇಂಟರಿಗೆ ತಲೆನೋವಾಗಿತ್ತು, ಮೇ 24ರಂದು ಬಾಗಲಕೋಟೆಯ ಚಿಕ್ಕಮ್ಯಾಗೇರಿಯಲ್ಲಿರುವ ಟವರ್ ಐಡಿ: 1379335ನಂಬರಿನ ಟವರಿನ ಬ್ಯಾಟರಿಗಳನ್ನು ರಾತ್ರಿ 10ಗಂಟೆ ಸುಮಾರಿಗೆ ಕಳ್ಳತನ ಮಾಡುತ್ತಿರುವುದನ್ನು ಗಮನಿಸಿದ್ದ ಗ್ರಾಮಸ್ಥರು ತಮ್ಮ ಮೊಬೈಲನಲ್ಲಿ ಬ್ಯಾಟರಿ ಒಯ್ಯಲು ತಂದಿದ್ದ ಕಾರು ಕೆ.ಎ-38, ಎ-2204 ನಂಬರಿನ ಕಾರಿನ ಫೋಟೊ ತಗೆದಿದ್ದರು. ಈ ಫೋಟೊವನ್ನು ಕಂಪನಿಯ ಮ್ಯಾನೇಜರ್ ಏಜೆಂಟರಿಗೆ ಕಳಿಸಿದ್ದರು. ಪೋಟೊ ಆದಾರವಾಗಿಟ್ಟುಕೊಂಡು ಇಂಡಸ್ ಕಂಪನಿಯ ಸುಪ್ರುವೈಸರ್ ಪ್ರಕಾಶ ಅವರು ಬಾಗಲಕೋಟೆಯ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಬಲೆ ಬೀಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮಸ್ಥರು ತೆಗೆದ ಪೋಟೊ ಕೊಟ್ಟ ಸುಳಿವು: ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಜೂನ್‌ 09ರಂದು ಎ1 ವಿರೇಶ ಅಂದಾನಪ್ಪ ರೇವಡಿ, ಎ2 ಶಿವಕುಮಾರ ಶಿಪುತ್ರಪ್ಪ ದೋನಿ, ಎ3 ಗ್ಯಾನಪ್ಪ, ಎ4 ಯಲ್ಲಪ್ಪ ಗೋಟುರ ಎಂಬುವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 28 ಬ್ಯಾಟರಿಗಳನ್ನು ದಸ್ತಗಿರಿ ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಎ1 ಮತ್ತು ಎ2 ಆರೋಪಿಗಳು ಬೆಂಗಳೂರಿನ ತೇಜ್ ಕಂಪನಿಯ ಕೆಲಸಗಾರರು. ಸುಳಿವು ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.


ಇಂಡಸ್ ಕಂಪನಿಯ ಟವರ್ ಇನ್‌ಚಾರ್ಜ ಮ್ಯಾನೇಜರ್‌ ಮಹಾಂತೇಶ ಕರಬಂಟನಾಳ ಹಾಗೂ ಸುಪ್ರುವೈಸರ್ ಬಾಲಪ್ಪ ಅಂಟರತಾನಿ ಪೊಲೀಸರನ್ನು ಅಭಿನಂದಿಸಿದ್ದಾರೆ.