ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸುಮಾರು ೫೦೦ ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಇದಕ್ಕೆ ₹೨,೫೦೦ ಕೋಟಿ ವಿಶೇಷ ಅನುದಾನದ ಮೀಸಲಿಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ತವರೂರು ಮಾಸ್ತಿಯಲ್ಲಿ ₹8 ಕೋಟಿ ವೆಚ್ಚದಲ್ಲಿ ಓಸಾಟ್ ಸಂಸ್ಥೆ ನವೀಕರಿಸಿರುವ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ದಾನಿಗಳಾದ ಲಿಂಡ ಮತ್ತು ಜನಾರ್ದನ್ ಟಕ್ಕರ್ ಫ್ಯಾಮಿಲಿ ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣಕ್ಕಾಗಿ ತಮ್ಮದೇಯಾದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ. ಯಾವುದೋ ರಾಜ್ಯದಲ್ಲಿ ಹುಟ್ಟಿ ಮೈಸೂರಿನಲ್ಲಿ ಶಿಕ್ಷಣ ಪಡೆದು ಮಕ್ಕಳಿಗಾಗಿ ಶಿಕ್ಷಣ ನೀಡಬೇಕೆಂಬ ಹಂಬಲ ನಿಜಕ್ಕೂ ಅಭಿನಂದನೀಯ. ಇವರ ಸಾಧನೆ ಅಮೋಘವಾಗಿದ್ದು, ಶಿಕ್ಷಣಕ್ಕೆ ಇನ್ನು ಹೆಚ್ಚು ಸೇವೆ ನೀಡಲಿ ಎಂದರು.
ರಾಜ್ಯದಲ್ಲಿ ಹೆಚ್ಚು ಸಮಸ್ಯೆಯಿರುವ ಇಲಾಖೆ ಎಂದರೆ ಶಿಕ್ಷಣ ಇಲಾಖೆ. ಅದನ್ನು ಸರಿದೂಗಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇತ್ತೀಚೆಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ 2ನೇ ಪರೀಕ್ಷೆ ಮಾಡಿ ಎಷ್ಟೋ ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ದೇಶದ ಭವಿಷ್ಯವಾದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದೇ ನಮ್ಮ ಧ್ಯೇಯ ಎಂದರು.ಸಚಿವರಿಂದ ₹5 ಲಕ್ಷ ನೆರವು:
ದಾನಿಗಳಾದ ಜನಾರ್ದನ್ ಠಕ್ಕರ್ ಕುಟುಂಬದಿಂದ ಕೆಪಿಎಸ್ ಶಾಲೆ ನವೀಕರಣವಾಗಿದ್ದು, ಇಂದು ಲೋಕಾರ್ಪಣೆಯಾಗಿದೆ ಇದರ ನಿರ್ವಹಣೆಗೆ ಗ್ರಾಮದ ಹಲವಾರು ದಾನಿಗಳು ತಮ್ಮದೇ ಆದ ಸಹಾಯ ಹಸ್ತ ನೀಡಿದ್ದಾರೆ. ಅದಕ್ಕೆ ನನ್ನ ಸಂಬಳದ ₹೫ ಲಕ್ಷ ನೀಡುತ್ತೇನೆ ಎಂದು ಘೋಷಿಸಿದರು.ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನೂತನ ಕೆಪಿಎಸ್ ಶಾಲೆಯ ನಿರ್ವಹಣೆಗೆ ಗ್ರಾಮದ ಜನರು ವಿವಿಧ ರೀತಿಯಲ್ಲಿ ತಮ್ಮ ಸಹಕಾರ ನೀಡುತ್ತಿದ್ದು, ನಾನು ಕೂಡ ಶಾಸಕರ ಸಂಬಳದ 1 ವರ್ಷದ ಹಣ ನೀಡುತ್ತೇನೆ ಎಂದು ಘೋಷಿಸಿದರು.
ದಾನಿಗಳಾದ ಲಿಂಡಾ ಜನಾರ್ದನ್ ಠಕ್ಕರ್ ದಂಪತಿಯನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ದಿನ್ನಳ್ಳಿ ರಮೇಶ್ ೧೬೫೦ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.ಶಾಸಕ ಕೆ.ವೈ.ನಂಜೇಗೌಡ, ಎಂಎಲ್ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಡಾ। ಎಂ.ಆರ್.ರವಿ ಇದ್ದರು.