ಸಾರಾಂಶ
ರಾಣಿಬೆನ್ನೂರು: ಕಾರ್ಮಿಕರಿಗೆ ಹಾಗೂ ರೈತರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ ಹೇಳಿದರು. ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಮೂಲಕ ಮನರೇಗಾ ಯೋಜನೆಯಡಿ ಸ್ಥಳೀಯ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಕಾರದಲ್ಲಿ ರೈತರ ಜಮೀನಿನಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ರು.27 ಲಕ್ಷ ವೆಚ್ಚದ ಕ್ರಿಯಾಯೋಜನೆಯ ಮಾದರಿ ಜಲಾನಯನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನೈಸರ್ಗಿಕ ಸಂಪನ್ಮೂಲಗಳಾದ ನೀರು ಸಂರಕ್ಷಣೆ ಜೊತೆಗೆ ಮಣ್ಣು, ಕಾಡು, ಕೃಷಿ ಪೂರಕವಾದ ಕಾಮಗಾರಿಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತಗಳು ಹಾಗೂ ಇತರೆ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು. ವನಸಿರಿ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಮುಖ್ಯಸ್ಥ ಎಸ್.ಡಿ. ಬಳಿಗಾರ ಮಾತನಾಡಿ, ಸಂಸ್ಥೆಯು ಕಾರ್ಮಿಕರ ವಲಸೆ ತಪ್ಪಿಸಲು ಬಡಜನರ ಜೀವನೋಪಾಯ ಕಾಯಕ ಜಲಾನಯನ ಅಭಿವೃದ್ಧಿ ಮೂಲಕ ಜಿಲ್ಲೆಯ ಬೇರೆ ಬೇರೆ ತಾಲೂಕಿನ ವಿವಿಧ ಪಂಚಾಯತಗಳಲ್ಲಿ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ 50 ಸಾವಿರ ಸಾವಿರ ಕಾರ್ಮಿಕರ ಸಂಘಟನೆ ಮಾಡುವ ಗುರಿ ಇಟ್ಟುಕೊಂಡಿದೆ ಎಂದರು. ತಾಪಂ ಇಒ ಸುಮಲತಾ ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ಮಹಿಳೆಯರಿಗೆ ಸಮಾನ ಕೂಲಿ ಇದ್ದು ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಕೆಲಸಕ್ಕೆ ಬರುವಂತೆ ತಿಳಿಸಿದರು. ಸಹಾಯಕ ನಿದೇಶಕ ಪರಶುರಾಮ ಪೂಜಾರ, ಕೃಷಿ ಅಧಿಕಾರಿ ಅರವಿಂದ, ಇಂಜಿನಿಯರ್ ಲತಾ, ಜಿ.ಪಿ.ನದಾಫ್, ನವೀನ್ ಛತ್ರದಮಠ, ಬಿ.ಎಫ್.ಟಿಗಳು, ನರೆಗಾ ಕಾರ್ಮಿಕರು, ಗ್ರಾಪಂ ಸದಸ್ಯರು ಹಾಗೂ ವನಸಿರಿ ಸಂಸ್ಥೆಯ ಸಿಬ್ಬಂದಿ ಇದ್ದರು.