ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಿತ್ಯ ಸಚಿವ ಕೆ.ವಿ.ಶಂಕರಗೌಡರು ನಿರ್ಮಿಸಿದ ರೈತಸಭಾಂಗಣದ ಆಧುನೀಕರಣ ಕಾರ್ಯವನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಕನ್ನಡ ಪುಸ್ತಕ ಪ್ರಾಧಿಕಾರದ ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ ಪುರಸ್ಕೃತ ಪ್ರೊ.ಬಿ.ಜಯಪ್ರಕಾಶಗೌಡ, ಮತ್ತೆ ಮತ್ತೆ ಶಂಕರಗೌಡ ಪುಸ್ತಕಕ್ಕೆ ಪುಸ್ತಕ ಮುದ್ರಣ ಸೊಗಸು ಬಹುಮಾನ ಪುರಸ್ಕೃತ ಎನ್.ನಾಗರಾಜು ಅವರನ್ನು ಅಭಿನಂದಿಸಿ ಮಾತನಾಡಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಿಎಸ್ಆರ್ ಅನುದಾನದಿಂದ ೪.೨೮ ಕೋಟಿ ರು. ಅನುದಾನ ಬಿಡುಗಡೆಗೊಳಿಸಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಆರಂಭಗೊಂಡಿರಲಿಲ್ಲ. ಈಗ ಕಾಮಗಾರಿಗೆ ಇದ್ದ ಸಮಸ್ಯೆಗಳನ್ನೆಲ್ಲಾ ನಿವಾರಿಸಿದ್ದು, ಜಿಲ್ಲಾಡಳಿತದ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಪ್ರೊ.ಬಿ.ಜಯಪ್ರಕಾಶಗೌಡರು ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ. ಸದಾ ಸಂಸ್ಕೃತಿ, ಸಾಹಿತ್ಯ, ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿರುತ್ತಾರೆ. ಮೂಡಲಪಾಯ ಯಕ್ಷಗಾನಕ್ಕೊಂದು ಆಯಾಮ ದೊರಕಿಸುತ್ತಿರುವ ಅವರು ನಾಟಕ, ರಂಗಭೂಮಿ ಬಗ್ಗೆಯೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಕರ್ನಾಟಕ ಸಂಘದಲ್ಲಿ ರಂಗಮಂದಿರವೊಂದನ್ನು ನಿರ್ಮಿಸುತ್ತಿದ್ದು, ಅದನ್ನು ಪೂರ್ಣಗೊಳಿಸುವುದು ಅವರ ಕನಸಾಗಿದೆ. ಅದಕ್ಕೆ ನಾನೂ ಕೂಡ ಬೆಂಬಲವಾಗಿ ನಿಂತು ಆ ಕಾರ್ಯವನ್ನು ನೆರವೇರಿಸಿಕೊಡುವ ಭರವಸೆ ನೀಡಿದರು.
ಕೆ.ವಿ.ಶಂಕರಗೌಡರು ಪ್ರೊ.ಜಯಪ್ರಕಾಶಗೌಡರಂತಹ ಅನೇಕ ಶಿಷ್ಯಕೋಟಿಯನ್ನು ಜಿಲ್ಲೆಯಲ್ಲಿ ಬೆಳೆಸಿಹೋಗಿದ್ದಾರೆ. ಅತ್ಯುತ್ತಮವಾದ ಕಾರ್ಯಸಾಧನೆಗಳು ಕೇಂದ್ರಸ್ಥಾನದಲ್ಲಿ ನಡೆಯುತ್ತಿವೆ. ಕರ್ನಾಟಕ ಸಂಘವನ್ನು ರಾಜ್ಯದಲ್ಲೇ ಮುಂಚೂಣಿಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ ಮಂತ್ರಿಯಾಗಿದ್ದ ನಾನು ಬಜೆಟ್ನಲ್ಲಿ ಕರ್ನಾಟಕ ಸಂಘಕ್ಕೆ ೧ ಕೋಟಿ ರು. ಅನುದಾನ ಕೊಡಿಸಿದ್ದೇವೆ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಕೆ.ಟಿ.ಶ್ರೀಕಂಠೇಗೌಡರು ಆ ಜವಾಬ್ದಾರಿಯನ್ನು ನಿರ್ವಹಿಸಿದ್ದಾಗಿ ತಿಳಿಸಿದರು.ಕೆ.ಟಿ.ಶ್ರೀಕಂಠೇಗೌಡರು ಕೂಡ ಉತ್ತಮ ವಾಕ್ಪಟು. ಅದರಿಂದಲೇ ವಿಧಾನಪರಿಷತ್ನಲ್ಲಿ ಉತ್ತಮ ಸದನಪಟು ಎಂಬ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಆ ಪ್ರಶಸ್ತಿಯನ್ನು ಪಡೆಯುವುದು ಸುಲಭವಲ್ಲ. ಅವರ ಸಾಧನೆಯೂ ದೊಡ್ಡದು ಎಂದು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂ.ಶ್ರೀನಿವಾಸ್ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿಗಳನ್ನಾಡಿದರು. ಕರ್ನಾಟಕ ಸಂಘದ ಹರೀಶ್ಕುಮಾರ್, ತಗ್ಗಹಳ್ಳಿ ವೆಂಕಟೇಶ್, ಲೋಕೇಶ್ ಚಂದಗಾಲು, ಕೆಂಪಮ್ಮ, ವಿನಯ್ಕುಮಾರ್ ಸೇರಿದಂತೆ ಹಲವರಿದ್ದರು.