ಜೋಶಿ ಕಾರ್ಯಕ್ಷಮತೆಗೆ ಮೋದಿ ಮೆಚ್ಚುಗೆ

| Published : May 02 2024, 12:15 AM IST

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ 10 ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಿದೆ. ಜೋಶಿ ಅಪ್ಪಟ್ಟ ಜನನಾಯಕರಾಗಿದ್ದಾರೆ. ಅವರ ಅಭಿವೃದ್ಧಿಯ ಕಾರ್ಯವನ್ನು ನಾನು ದೆಹಲಿಯಲ್ಲಿದ್ದುಕೊಂಡೇ ನೋಡಿದ್ದೇನೆ.

ಹುಬ್ಬಳ್ಳಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಕೇತ್ರದ ಜನರು ವ್ಯಕ್ತಪಡಿಸುವ ಅಭಿಪ್ರಾಯ, ಕಾರ್ಯಕ್ಷಮತೆಯನ್ನು ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಜೋಶಿಗೆ ಪತ್ರ ಬರೆದಿದ್ದಾರೆ.

ಪ್ರತಿ ಮನೆಯ ಜನರ ಪ್ರೀತಿಗೆ ಪಾತ್ರರಾಗಿದ್ದೀರಿ, ಕ್ಷೇತ್ರದಲ್ಲಿ ನಿಮ್ಮ ಪರಿಶ್ರಮದಿಂದ ಹೊಸ ದಾಖಲೆ ಸೃಷ್ಟಿಯಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಕೇತ್ರದ ಜನ ನಿಮ್ಮಲ್ಲಿ ನನ್ನನ್ನು ಕಾಣುತ್ತಿದ್ದಾರೆ. ಮತದಾರರ ದೃಷ್ಟಿಯಲ್ಲಿ ನೀವೂ ಕೂಡಾ ಒಬ್ಬ ಮೋದಿ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ 10 ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಅವರಿಗೆ ಶ್ರೀರಕ್ಷೆಯಾಗಿದೆ. ಜೋಶಿ ಅಪ್ಪಟ್ಟ ಜನನಾಯಕರಾಗಿದ್ದಾರೆ. ಅವರ ಅಭಿವೃದ್ಧಿಯ ಕಾರ್ಯವನ್ನು ನಾನು ದೆಹಲಿಯಲ್ಲಿದ್ದುಕೊಂಡೇ ನೋಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಖೇಲೋ ಇಂಡಿಯಾ ಕಾಂಪ್ಲೆಕ್ಸ್, ರೈಲ್ವೆ ಅಭಿವೃದ್ಧಿ, ವಿಮಾನ ನಿಲ್ದಾಣ ಮೇಲ್ದರ್ಜೆ, ಫ್ಲೈ ಓವರ್, ಕಾಂಕ್ರಿಟ್ ರಸ್ತೆ, ಸ್ಮಾರ್ಟ್ ಸಿಟಿ ಯೋಜನೆ, ಶಾಲೆಗಳಿಗೆ ಬಣ್ಣ, ಜಲಜೀವನ್ ಯೋಜನೆ, ಪೈಪ್ಡ್ ಗ್ಯಾಸ್, ಐಐಟಿ, ಐಐಐಟಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿ, ಈ ಎಲ್ಲ ಅಭಿವೃದ್ಧಿ ಕಾರ್ಯಗಳೇ ನಿಮಗೆ ವಿಜಯಶಾಲಿಯಾಗುವಂತೆ ಮಾಡುತ್ತವೆ ಎಂದು ಬಣ್ಣಿಸಿದ್ದಾರೆ.

ಬಿಜೆಪಿಯ ಒಬ್ಬ ಅಭ್ಯರ್ಥಿಯಾದ ತಮ್ಮಲ್ಲಿ ನನ್ನ ಕೋರಿಕೆ ಏನೆಂದರೆ ಪ್ರತಿ ಮತದಾರರಿಗೆ ನನ್ನ ಜೀವನದ ಪ್ರತಿ ಕ್ಷಣವು ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಮುಡಿಪಾಗಿದೆ ಎಂಬ ಸಂದೇಶವನ್ನು ತಲುಪಿಸಿ. ಈ ಚುನಾವಣೆಯಲ್ಲಿ ತಾವು ವಿಜಯಶಾಲಿ ಆಗಲೆಂದು ಹಾರೈಸುವೆ ಎಂದೂ ಜೋಶಿ ಅವರಿಗೆ ಶುಭ ಹಾರೈಸಿದ್ದಾರೆ. ನಮ್ಮ ಅವಿರತ ಶ್ರಮ 24x7 ದಿಂದ 2047ರ ವರೆಗೆ ಎಂಬುದನ್ನು ಮರೆಯಬೇಡಿ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.