ಮತಕ್ಕಾಗಿ ಮಾಂಗಲ್ಯವನ್ನು ಮಧ್ಯೆ ತಂದ ಮೋದಿ ಅಪಾಯಕಾರಿ: ಮಧು

| Published : Apr 24 2024, 02:32 AM IST

ಮತಕ್ಕಾಗಿ ಮಾಂಗಲ್ಯವನ್ನು ಮಧ್ಯೆ ತಂದ ಮೋದಿ ಅಪಾಯಕಾರಿ: ಮಧು
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಅವರು ಪ್ರಧಾನಿ ಎನ್ನುವುದನ್ನು ಮರೆತು ಮಹಿಳೆಯರನ್ನು ಮಧ್ಯ ತಂದು ಮಾಂಗಲ್ಯದ ವಿಷಯ ಪ್ರಸ್ತಾಪಿದ್ದು ಅಕ್ಷಮ್ಯ ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಧಾನಿ ನರೇಂದ್ರ ಮೋದಿಯವರು ಮಾಂಗಲ್ಯವನ್ನು ಮಧ್ಯ ತಂದು ಮತ ಕೇಳುವ ಮಟ್ಟಕ್ಕೆ ಹೋಗಿರುವುದು ಅತ್ಯಂತ ಅಪಾಯಕಾರಿ. ಪ್ರಧಾನಿ ಮಂತ್ರಿ ಯಾದವರು ಇಷ್ಟು ಕೀಳುಮಟ್ಟ ರಾಜಕಾರಣ ಮಾಡಬಾರದು ಎಂದು ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಮಹಿಳೆಯರಿಗೆ ಗೌರವ ಕೊಡುತ್ತದೆ ಎಂಬ ಮಾತು ಸುಳ್ಳಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಎನ್ನುವುದನ್ನು ಮರೆತು ಮಹಿಳೆಯರನ್ನು ಮಧ್ಯ ತಂದು ಮಾಂಗಲ್ಯದ ವಿಷಯ ಪ್ರಸ್ತಾಪಿದ್ದಾರೆ. ಜಾತಿ, ಧರ್ಮ, ರಾಮ, ಹಣ ಮುಂತಾದ ಆಟಗಳೆಲ್ಲ ಈಗ ಮುಗಿದ ಅಧ್ಯಾಯ ಬಿಜೆಪಿ ಆಡಳಿತದಲ್ಲಿಯೇ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗಿರುವುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಅದರಲ್ಲೂ ಗುಜರಾತ್ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲೂ ಕೂಡ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚಿನ ಅಪರಾಧಗಳು ಆಗಿವೆ. ನಮ್ಮ ಸರ್ಕಾರ ಬಂದ ನಂತರ ನಾವು ಕಾನೂನನ್ನು ಬಿಗಿ ಯಾಗಿ ತೆಗೆದುಕೊಂಡಿದ್ದೇವೆ ಎಂದರು.

ಬರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದ್ದನ್ನು ಎತ್ತಿ ಹಿಡಿದಿದೆ. ನಮಗೆ ಬರಬೇಕಾದ ಹಣವನ್ನು ಅವರು ಕೊಡಲಿಲ್ಲ. ಕರ್ನಾಟಕದ ಯಾವ ಎಂಪಿಗಳು ಬರದ ಬಗ್ಗೆ ಮಾತನಾಡಲಿಲ್ಲ ಈಗ ಸುಪ್ರೀಂ ಕೋರ್ಟ್ ಹೇಳಿದ ಮೇಲೆ ತೆಪ್ಪಗಾಗಿದ್ದರೆ ಎಂದು ಕುಟುಕಿದರು.

ಈಶ್ವರಪ್ಪ ಅವರು ಹಿರಿಯ ರಾಜಕಾರಣಿ. ಒಂದು ಕಡೆ ಗೀತಾ ನನ್ನ ಸಹೋದರಿ ಎನ್ನುತ್ತಾರೆ. ಮತ್ತೊಂದು ಕಡೆ ಕೀಳಾಗಿ ಮಾತನಾಡುತ್ತಾರೆ. ಡಮ್ಮಿ ಅಭ್ಯರ್ಥಿ ಎನ್ನುತ್ತಾರೆ. ಈ ವಯಸ್ಸಿಗೆ ಈಶ್ವರಪ್ಪನವರು ಈ ರೀತಿ ಮಾತನಾಡುವುದು ಸರಿಯಲ್ಲ. ಪುತ್ರನಿಗೆ ಟಿಕೆಟ್ ಕೊಡಿಸಲಾಗದ ಅವರು ಹತಾಶರಾಗಿ ಮಾತನಾಡು ತ್ತಿದ್ದಾರೆ. ಲಘುವಾಗಿ ಮಾತಾಡುವುದನ್ನು ಅವರು ನಿಲ್ಲಿಸಬೇಕು ಎಂದರು.

ಕಾಂಗ್ರೆಸ್ ತನ್ನ ಗ್ಯಾರಂಟಿ ಕಾರ್ಡ್‌ಗಳನ್ನು ಮನೆಮನೆಗೆ ತಲುಪಿಸುತ್ತಿದೆ. ಇನ್ನೆರಡು ದಿನಗಳಲ್ಲಿ ಪ್ರತಿ ಮನೆಗಳಲ್ಲೂ ಗ್ಯಾರಂಟಿ ಕಾರ್ಡ್ ಇರುತ್ತದೆ. ಎಲ್ಲರೂ ಒಟ್ಟಾಗಿ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ರಮೇಶ್ ಹೆಗ್ಡೆ, ವೈ.ಎಚ್.ನಾಗರಾಜ್, ಶಿವಾನಂದ್, ಏಸುದಾಸ್, ಮುಕ್ತಿಯಾರ್ ಮತ್ತಿತರರಿದ್ದರು.