ಸಾರಾಂಶ
ಗದಗ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕೇವಲ ಹತ್ತು ವರ್ಷಗಳ ದೂರದೃಷ್ಟಿಯ, ಅಭಿವೃದ್ಧಿಪರ ಆಡಳಿತದಿಂದ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಸೂಚಿಯಲ್ಲಿ ಭಾರತ ೫ನೇ ಸ್ಥಾನಕ್ಕೆ ತಂದಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದ್ದು, ಮೋದಿ ಅವರ ದೂರದೃಷ್ಟಿಯ ಆಡಳಿತದ ಫಲ ಎಂದು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಬೆಳದಡಿ ತಾಂಡಾದಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬರುವ ೫ ವರ್ಷದಲ್ಲಿ ಭಾರತವನ್ನು ಜಗತ್ತಿನ ೩ನೇ ಅತಿ ದೊಡ್ಡ ಆರ್ಥಿಕ ಸದೃಢ ದೇಶವನ್ನಾಗಿ ಮಾಡುವ ಪಣತೊಟ್ಟ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಗತ್ತು ಮೆಚ್ಚಿದ ಸದೃಢ ನಾಯಕ ನರೇಂದ್ರ ಮೋದಿ ಅವರು ಭಾರತ ಮಾತೆಯ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದೇಶ ಮೊದಲು ಎಂಬ ಸಿದ್ಧಾಂತದೊಂದಿಗೆ ಮಾಡಿದ ಅಭಿವೃದ್ಧಿ ಕೆಲಸದಿಂದ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸುವಲ್ಲಿ ಸಕ್ಷಮವಾಗಿದೆ. ಇಂಥ ಪ್ರಧಾನಮಂತ್ರಿಯನ್ನು ಮತ್ತೊಮ್ಮೆ ಮಗದೊಮ್ಮೆ ಪ್ರಧಾನ ಸೇವಕರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ಈ ಸಂದರ್ಭದಲ್ಲಿ ಬಸವಣ್ಣಪ್ಪ ಚಿಂಚಲಿ, ಅಶೋಕ್ ಸಂಕಣ್ಣವರ್, ಭದ್ರೇಶ ಕುಸ್ಲಾಪುರ್, ಗ್ರಾಮೀಣ ಮಂಡಲ ಅಧ್ಯಕ್ಷ ದ್ಯಾಮಣ್ಣ ನೀಲಗುಂದ, ಪ್ರಧಾನ ಕಾರ್ಯದರ್ಶಿ ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥ ಸ್ವಾಮಿ, ಅಮರನಾಥ ಬೆಟಗೇರಿ, ಅಮರನಾಥ ಗಡಗಿ, ಸುಧೀರ ಕಾಟಿಗಾರ, ವೆಂಕಟೇಶ್ ಹಬೀಬ್, ವಿನಾಯಕ ಹಬೀಬ್, ಟಿ.ಡಿ. ಪೂಜಾರ, ಬಾಗಪ್ಪ ವಗ್ಗರ ಕಾರ್ಯಕರ್ತರು ಇದ್ದರು.