ಸಾರಾಂಶ
ನರಸಿಂಹರಾಜಪುರ: ಕಳೆದ ಲೋಕ ಸಭಾ ಚುನಾವಣೆಯಲ್ಲಿ ಮತ ಕಳ್ಳತನದಿಂದ ಮೋದಿ ನೇತ್ರತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಎಂ.ಆರ್.ರವಿಶಂಕರ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ನಗರ ಘಟಕ ಹಾಗೂ ನಾಗಲಾಪುರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಘಟಕದ ವತಿಯಿಂದ ಮತ ಕಳ್ಳತನ ವಿರುದ್ಧ ಜನ ಜಾಗೃತಿ ಸಹಿ ಅಭಿಯಾನದಲ್ಲಿ ಮಾತನಾಡಿದರು.ದೇಶದಾದ್ಯಂತ ಈಗಾಗಲೇ ಕಾಂಗ್ರೆಸ್ ಪಕ್ಷದ ನೇತಾರ ರಾಹುಲ್ ಗಾಂಧಿ ಮತ ಕಳ್ಳತನದ ದಾಖಲೆಯೊಂದಿಗೆ ಹೋರಾಟ ಮಾಡುತ್ತಿದ್ದಾರೆ. ಕೇಂದ್ರದ ಮೋದಿ ನೇತ್ರತ್ವದ ಬಿಜೆಪಿ ಪಕ್ಷವು ಚುನಾವಣಾ ಆಯೋಗವನ್ನು ದುರಪಯೋಗ ಮಾಡಿಕೊಂಡಿದೆ. ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾದ ಚುನಾವಣೆಯನ್ನು ಅಪನಂಬಿಕೆ ಬರುವ ರೀತಿಯಲ್ಲಿ ಮಾಡಲಾಗಿದೆ. ಈ ಓಟ್ ಚೋರಿ ವಿರುದ್ಧ ಕಾಂಗ್ರೆಸ್ ಪಕ್ಷವು ಗ್ರಾಮ ಮಟ್ಟದಲ್ಲೂ ಮತದಾರರ ಹಕ್ಕನ್ನು ತೋರಿಸಲು ದೇಶದಾದ್ಯಂತ ಸಹಿ ಹಾಕುವುದರ ಮೂಲಕ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕಾಗಿದೆ ಎಂದರು.
ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಮಾತನಾಡಿ, ಬಿಜೆಪಿ ಪಕ್ಷದವರು ಮತ ಕಳ್ಳತನ ಮಾಡುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದಾರೆ.ಮತದಾನ ನಮ್ಮ ಹಕ್ಕಾಗಿದೆ.ಮತ ಯಂತ್ರದ ಬಗ್ಗೆ ನಮಗೆ ಸಂಶಯವಿದೆ.ಆದ್ದರಿಂದ ಹಿಂದಿನ ಪದ್ದತಿಯಂತೆ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯಲಿ ಎಂದರು.ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎ.ಅಬೂಬಕರ್, ಕೆಡಿಪಿ ಸದಸ್ಯ ಅಂಜುಂ, ಪಟ್ಟಣ ಪಂಚಾಯಿತಿ ಸದಸ್ಯರಾದ ವಾಸಿಂ, ಸುರೈಯಾಬಾನು, ಮುನಾವರ್ ಪಾಷಾ,ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಇಂದಿರಾ ನಗರ ರಘು, ನಾಗಲಾಪುರ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷ ಸುಜಿತ್, ಮುಖಂಡ ಅಶ್ವಲ್ ಮತ್ತಿತರರು ಇದ್ದರು. ಜುಬೇದ ಸ್ವಾಗತಿಸಿದರು.