ಸಾರಾಂಶ
ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ವಿಶ್ವ ಗುರುವಾಗಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
ಕನ್ನಡಪ್ರಭವಾರ್ತೆ ಕುಷ್ಟಗಿನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿ ವಿಶ್ವ ಗುರುವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಟೀಕಿಸಿದರು.
ತಾಲೂಕಿನ ತಳುವಗೇರಾ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ ಹಾಗೂ ಹನಮಸಾಗರ ವತಿಯಿಂದ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜವಾಹರ ಲಾಲ್ ನೆಹರು ಶಿಕ್ಷಣ ಕ್ರಾಂತಿ ಮಾಡಿದ್ದಾರೆ, ಇಂದಿರಾಗಾಂಧಿ ಹಸಿರು ಕ್ರಾಂತಿ ಮಾಡಿದ್ದಾರೆ, ರಾಜೀವಗಾಂಧಿ ತಂತ್ರಜ್ಞಾನ ಕಾರ್ಯಕ್ರಮ ನೀಡಿದ್ದಾರೆ. ಆದರೆ ನರೇಂದ್ರ ಮೋದಿ ಅಭಿವೃದ್ಧಿ ಮಾಡಿಲ್ಲ. ಕೇವಲ ಸುಳ್ಳು ಹೇಳುವ ಮೂಲಕ ಸುಳ್ಳಿನ ಕ್ರಾಂತಿ ಮಾಡಿದ್ದಾರೆ. ಬಿಜೆಪಿಗರ ಪಾಲಿಗೆ ನರೇಂದ್ರ ಮೋದಿ ದೇವರು ಸಂಸದರೆಲ್ಲ ಪೂಜಾರಿಗಳು ಇದ್ದಂತೆ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿಯ ಯೋಜನೆ ಸದುಪಯೋಗ ಪಡೆದುಕೊಳ್ಳುತ್ತಿರುವ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಾಡಿನ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅವರಿಗೆ ಎಲ್ಲ ಮಹಿಳೆಯರು ಚುನಾವಣೆಯಲ್ಲಿ ಪಾಠ ಕಲಿಸುವ ಕೆಲಸ ಮಾಡಬೇಕು. ಸಂಗಣ್ಣನವರು ನಮ್ಮ ಪಕ್ಷಕ್ಕೆ ಬಂದಿದ್ದರಿಂದ ನಮಗೆ ಡಬಲ್ ಶಕ್ತಿ ಬಂದಿದೆ. ನಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ಮತ ಹಾಕಿ ಗೆಲ್ಲಿಸಬೇಕು ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷದಲ್ಲಿ ದೇಶದಲ್ಲಿ ಒಂದೇ ಒಂದು ಡ್ಯಾಮ್ ಕಟ್ಟಿಲ್ಲ. ಕೇವಲ ಸುಳ್ಳುಗಳ ಮೂಲಕ ಅಧಿಕಾರ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ನೀಡಿದ ಭರವಸೆಗಳ ಪೈಕಿ ಯಾವದನ್ನು ಈಡೇರಿಸಿಲ್ಲ. ಯುವಕರಿಗೆ ಉದ್ಯೋಗ ನೀಡಿಲ್ಲ, ರೈತರ ಸಾಲಮನ್ನಾ ಮಾಡಿಲ್ಲ, ಮಹಿಳೆ ಮತ್ತು ಬಡವರಿಗೆ ಯಾವುದೇ ಯೋಜನೆ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಲತಿ ನಾಯಕ, ಅಮರೇಗೌಡ ವಕೀಲರು, ಶಂಕರಗೌಡ ವಕೀಲರು, ಉಮೇಶ ಮಂಗಳೂರು, ಕಲ್ಲಪ್ಪ ತಳವಾರ, ವಸಂತ ಮೇಲಿನಮನಿ, ಶಕುಂತಲಾ ಹಿರೇಮಠ, ಶಾರದಾ ಕಟ್ಟಿಮನಿ, ಶರಣಗೌಡ ಮಾಲಿ ಪಾಟೀಲ, ವಸಂತ ಮೇಲಿನಮನಿ, ಸಂಗಪ್ಪ ಭಾವಿಕಟ್ಟಿ, ಫಾರೂಕ್ ಡಾಲಾಯತ್, ವಿಜಯಕುಮಾರ ಮುಧೋಳ ಸೇರಿದಂತೆ ಕಾರ್ಯಕರ್ತರು ಇದ್ದರು.