ದೇಶದ ರಕ್ಷಣೆಗೆ ಮೋದಿ ಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

| Published : May 03 2024, 01:05 AM IST

ಸಾರಾಂಶ

ಈ ದೇಶದ ಕೀಲಿ ಕೈಯನ್ನು ಯಾರ ಕೈಯಲ್ಲಿ ಕೊಡಬೇಕು ಎಂದು ಪ್ರಶ್ನಿಸಿದ ಅವರು, ಮೋದಿ ಎದುರಾಳಿ ಯಾರು ಎಂಬುದು ನಮ್ಮ ಕಣ್ಮುಂದೆ ಕಾಣುತ್ತಿಲ್ಲ. ಆದರೆ ನಮ್ಮ ನಾಯಕ ಮೋದಿ.

ಹರಪನಹಳ್ಳಿ: ಈ ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರಗೆ ಮತ ಹಾಕಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತದಾರರಲ್ಲಿ ಮನವಿ ಮಾಡಿದರು.

ಅವರು ಪಟ್ಟಣದಲ್ಲಿ ಗುರುವಾರ ರೋಡ್‌ ಶೋ ನಡೆಸಿ ಕೊಟ್ಟೂರು ವೃತ್ತದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದರು.

ಈ ದೇಶದ ಕೀಲಿ ಕೈಯನ್ನು ಯಾರ ಕೈಯಲ್ಲಿ ಕೊಡಬೇಕು ಎಂದು ಪ್ರಶ್ನಿಸಿದ ಅವರು, ಮೋದಿ ಎದುರಾಳಿ ಯಾರು ಎಂಬುದು ನಮ್ಮ ಕಣ್ಮುಂದೆ ಕಾಣುತ್ತಿಲ್ಲ. ಆದರೆ ನಮ್ಮ ನಾಯಕ ಮೋದಿ ಎಂದು ಹೇಳಿದರು.

ಬಡವರ, ದೇಶದ ರೈತರ ಉಳಿವಿಗಾಗಿ ಹಾಗೂ ವಿದೇಶದಲ್ಲಿ ಭಾರತಕ್ಕೆ ಗೌರವ ಸಿಗಬೇಕಾದರೆ ಮೋದಿ ಅಗತ್ಯ ಎಂದು ತಿಳಿಸಿದರು.

ಸೈನಿಕನ ಕೈಗೆ ಆಧುನಿಕ ಶಸ್ತ್ರಾಸ್ತ್ರ ಕೊಟ್ಟವರು ಮೋದಿ. ಬೂತ್‌ ಮಟ್ಟದಲ್ಲಿ ಮೋದಿ ಏಕೆ ಬೇಕು ಎಂಬುದನ್ನು ಮನವರಿಕೆ ಮಾಡಿ ಬಿಜೆಪಿಗೆ ಮತ ಹಾಕಿಸಿ ಎಂದು ಅವರು ಕೋರಿದರು.

ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ನಾನು ಹರಪನಹಳ್ಳಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿ, ಒಮ್ಮೆ ಸಂಸದನಾಗಿ ಕೆರೆಗಳಿಗೆ ನದಿ ನೀರು ಹರಿಸುವುದು ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜಿ.ಎಂ. ಸಿದ್ದೇಶ್ವರ ಸಹ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.

ಈಗ ಕಳೆದಿರುವ 10 ವರ್ಷ ಟ್ರೈಯಲ್‌ ಮುಂದೆ ಅಸಲಿ ಕತೆ ಇದೆ ಎಂದು ಮೋದಿ ಹೇಳಿದ್ದಾರೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮತ ಹಾಕಿ ಎಂದು ಹೇಳಿದರು.

ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ವಿಕಸಿತ ಭಾರತಕ್ಕಾಗಿ ಹಾಗೂ ಸೇವಕನಾಗಿ ಕೆಲಸ ಮಾಡುವ ವ್ಯಕ್ತಿ ಮೋದಿ. ಹೆಣ್ಣು ಮಕ್ಕಳ ರಕ್ಷಣೆಗಾಗಿ, ರೈತರ ಏಳಿಗೆಗಾಗಿ ಉತ್ತಮ ನಾಯಕನಿಗಾಗಿ ನನಗೆ ಮತ ಹಾಕಿ ಗೆಲ್ಲಿಸಿ ಎಂದು ಕೋರಿದರು.

ಹರಿಹರ ವೃತ್ತದಿಂದ ಹೊಸ ಬಸ್‌ ನಿಲ್ದಾಣ, ತೆಗ್ಗಿನಮಠ ರಸ್ತೆ ಹಾಗೂ ಕೊಟ್ಟೂರು ರಸ್ತೆಯಲ್ಲಿ ಶೋಭಾ ಕರಂದ್ಲಾಜೆ ರೋಡ್‌ ಶೋ ನಡೆಸಿದರು.

ಬಿಜೆಪಿ ಮುಖಂಡ ಆರ್‌.ಲೋಕೇಶ, ಪುರಸಭಾ ಸದಸ್ಯರಾದ ರೊಕ್ಕಪ್ಪ, ಕಿರಣ್‌ ಶಾನ್ಬಾಗ್, ಜಾವೇದ್, ವಿನಾಯಕ ಗೌಳಿ, ಸುಮಾ ವಾಗೀಶ, ತಾರಾ ಹನುಮಂತಪ್ಪ, ಶಿರಗಾನಹಳ್ಳಿ ವಿಶ್ವನಾಥ, ವಿಷ್ಣುರೆಡ್ಡಿ, ಮಾಜಿ ಸದಸ್ಯೆ ವಿಜಯಲಕ್ಷ್ಮಿ, ತಿಮ್ಮಣ್ಣ, ಮಲ್ಲೇಶ, ಯಡಿಹಳ್ಳಿ ಶೇಖರಪ್ಪ, ಮತ್ತಿತರರು ಪಾಲ್ಗೊಂಡಿದ್ದರು.