ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದ ಅಭಿವೃದ್ಧಿ ಹಾಗೂ ವಿಶ್ವಗುರು ಪಟ್ಟ ಸಿಗುವ ಸುಸಂದರ್ಭದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ದೇಶವಾಸಿಗಳ ಅಭಿಪ್ರಾಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ಗೋಡೆ ಬರಹಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣ ಮಾಡಿದ್ದಕ್ಕೆ ದೇಶ ಹಾಗೂ ವಿದೇಶಗಳಲ್ಲಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ನಿರ್ಮಾಣದಿಂದ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿದವರಿಗೆ ಈಗ ಉತ್ತರ ಸಿಕ್ಕುತ್ತಿದೆ. ಉತ್ತರ ಪ್ರದೇಶ ಸರ್ಕಾರದ ಬೊಕ್ಕಸಕ್ಕೆ ₹ 20 ಸಾವಿರ ಕೋಟಿ ಶ್ರೀರಾಮ ಮಂದಿರದಿಂದಲೇ ಬರಲಿದೆ ಎಂದು ಎಸ್ಬಿಐಯ ಸಮೀಕ್ಷೆಯಿಂದ ತಿಳಿದು ಬಂದಿದೆ. ಅಯೋಧ್ಯೆ ಶ್ರೀರಾಮ ಮಂದಿರವನ್ನು ಸುಪ್ರೀಂ ಕೋರ್ಟಿನ ತೀರ್ಪು ಬಂದ ಬಳಿಕ ಕಟ್ಟಿದ್ದೇವೆ, ಬಿಜೆಪಿ ಸಂವಿಧಾನಕ್ಕೆ ಗೌರವ ಕೊಡುವ ಪಕ್ಷ ಎಂದರು.
500 ವರ್ಷಗಳ ಸತತ ಹೋರಾಟದಲ್ಲಿ ಮೃತಪಟ್ಟಿದ್ದ ಲಕ್ಷಾಂತರ ಹಿಂದೂಗಳು ಹಾಗೂ ಕರಸೇವಕರಾಗಿ ಹೋಗಿದ್ದ ಹಲವು ಕರ ಸೇವಕರು ತಮ್ಮ ಪ್ರಾಣ ಕಳೆದುಕೊಂಡರು ಅಂತಹ ಎಲ್ಲರಿಗೂ ಆತ್ಮಶಾಂತಿ ಸಿಕ್ಕಿದೆ ಎಂದರು. ಒಂದು ಕಾಲಕ್ಕೆ ಭಾರತವೆಂದರೆ ಮೂಗು ಮುರಿಯುತ್ತಿದ್ದ ವಿದೇಶಿಗರು ಇಂದು ಅದೇ ರಾಷ್ಟ್ರಗಳು ಭಾರತ ಎಂದರೆ ಸಾಕು ನಮಸ್ಕಾರ ಮಾಡುವ ರೂಢಿ ಬೆಳೆಸಿಕೊಂಡಿದ್ದಾರೆ. ಅಂತಹ ತಾಕತ್ತು ಮೋದಿ ಪ್ರಧಾನಿಯಾದ ಬಳಿಕ ಸಾಧ್ಯವಾಯಿತು, ಇಂತಹ ಪ್ರಧಾನಿ ಕಳೆದುಕೊಳ್ಳಲು ಯಾರೂ ಇಷ್ಟಪಡಲ್ಲ ಎಂದರು.ಬಿಜೆಪಿ ಚುನಾವಣೆಯ ಪ್ರಣಾಳಿಕೆಯಲ್ಲಿದ್ದ ಶ್ರೀ ರಾಮಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು, ತ್ರಿವಳಿ ತಲಾಖ್ ರದ್ದು ,ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ಇತರ ಯೋಜನೆಗಳ ಪ್ರಣಾಳಿಕೆಯಂತೆ ಈಡೇರಿಸಿದ್ದೇವೆ. ಮೋದಿ ಪ್ರಧಾನಿಯಾದ ಬಳಿಕ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಪ್ರಗತಿ 5ನೇ ಸ್ಥಾನಕ್ಕೆ ಬಂದಿದೆ, ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೇರಲಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಉಚಿತವಾಗಿ ಉಜ್ವಲ ಯೋಜನೆ ನೀಡಿ ಹೊಗೆ ಮುಕ್ತ ಮಾಡಿದ್ದಾರೆ, ಗರೀಬ್ ಕಲ್ಯಾಣ ಯೋಜನೆಯಲ್ಲಿ ಬಿಪಿಎಲ್ ಹೊಂದಿದ ಎಲ್ಲರಿಗೂ ಉಚಿತ ಅಕ್ಕಿ ನೀಡಿ ಕೇಂದ್ರ ಸರ್ಕಾರ ಸುಳ್ಳು ಭರವಸೆಗಳ ನೀಡದೆ, ಸಾಧ್ಯವಾಗುವ ಯೋಜನೆಗಳಿಗೆ ಮಾತ್ರ ಭರವಸೆ ನೀಡಿ ಆ ಭರವಸೆಗಳನ್ನೆಲ್ಲ ಈಡೇರಿಸಿರುವುದು ನಮ್ಮ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಂದರು.ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್ ಜೆ.ಕೆ.,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್,ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್,ತಾ.ಪಂ. ಮಾಜಿ ಉಪಾಧ್ಯಕ್ಷ ಶಿವಾನಂದ್,ಕುಬೇಂದ್ರಪ್ಪ,ಶ್ರೀನಿವಾಸ್ ಹಾಗೂ ಇತರರಿದ್ದರು.ಲೋಕಸಭೆ ಚುನಾವಣೆ: ಎನ್ಡಿಎಗೆ 450ಕ್ಕೂ ಹೆಚ್ಚು ಸ್ಥಾನ ನಿರೀಕ್ಷೆ
ಒಂದು ಕಾಲದಲ್ಲಿ ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಮನೆಯಿಂದ ಹೊರಗೆಳೆದು ಹಾಕುತ್ತಿದ್ದರು. ಮೋದಿ ಅಧಿಕಾರಕ್ಕೆ ಬಂದ ಬಳಿಕ ಆರ್ಟಿಕಲ್ 370 ರದ್ದು ಮಾಡಿದ ನಂತರ ಅಲ್ಲಿನ ಹಿಂದೂಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ತ್ರಿವಳಿ ತಲಾಖ್ ನಿಷೇಧಿಸಿದ್ದರಿಂದ ಮುಸ್ಲಿಂ ಹೆಣ್ಣು ಮಕ್ಕಳೂ ನಮ್ಮೆದಿಯ ಜೀವನ ನಡೆಸುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿ ಎಂದು ದೇಶವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ, ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಮುಂಬರುವ ಚುನಾವಣೆಯಲ್ಲಿ ಎನ್ಡಿಎ ಮಿತ್ರಕೂಟಕ್ಕೆ 450ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.