ತುಮಕೂರು ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್ ಸ್ಪರ್ಧೆ

| Published : Mar 19 2024, 12:52 AM IST

ತುಮಕೂರು ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ನಿಂದ ಕುಂಚಿಟಿಗ ಸಮುದಾಯದ ಮುರುಳೀಧರ ಹಾಲಪ್ಪ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ನೀಡಲಿಲ್ಲ.

ಕನ್ನಡಪ್ರಭ ವಾರ್ತೆ ಶಿರಾ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಕುಂಚಿಟಿಗರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬೇರೆ ಸಮುದಾಯದವರಿಗೆ ಟಿಕೆಟ್ ನೀಡಿದ್ದಾರೆ. ಈ ನಿಟ್ಟಿನಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಎಸ್.ಎಲ್.ಮೋಹನ್ ತಿಳಿಸಿದ್ದಾರೆ.

ಅವರು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ತುಮಕೂರು ಜಿಲ್ಲೆಯಲ್ಲಿ ಪಾವಗಡ, ಶಿರಾ ತಾಲೂಕು ಚಿತ್ರದುರ್ಗ ಲೋಕಸಭೆಗೆ ಒಳಪಡುತ್ತವೆ. ಕುಣಿಗಲ್ ತಾಲೂಕು ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಒಳಪಡುತ್ತದೆ. ಜಿಲ್ಲೆಯಲ್ಲಿ ತುರುವೇಕೆರೆ ಮತ್ತು ತಿಪಟೂರು ಹೊರತುಪಡಿಸಿ ಉಳಿದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಕುಂಚಿಟಿಗ ಮತದಾರರಿದ್ದಾರೆ. ಸುಮಾರು 3.50 ಲಕ್ಷ ಮತದಾರರಿದ್ದಾರೆ. ಕಾಂಗ್ರೆಸ್ನಿಂದ ಕುಂಚಿಟಿಗ ಸಮುದಾಯದ ಮುರುಳೀಧರ ಹಾಲಪ್ಪ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ನೀಡಲಿಲ್ಲ. ಬಿಜೆಪಿಯಿಂದ ಸೋಮಣ್ಣ ಅವರಿಗೆ ಟಿಕೇಟ್ ನೀಡಿದ್ದಾರೆ. ಸೋಮಣ್ಣ ಅವರು ಬೆಂಗಳೂರಿನವರು, ಕಾಂಗ್ರೆಸ್ ಪಕ್ಷ ಮುದ್ದೆಹನುಮೇಗೌಡ ಅವರಿಗೆ ಟಿಕೆಟ್ ನೀಡಿದೆ. ಮುದ್ದೆಹನುಮೇಗೌಡ ಅವರು ಕುಣಿಗಲ್ ತಾಲೂಕಿನವರು. ಇಬ್ಬರೂ ಹೊರಗಿನವರು. ಆದ್ದರಿಂದ ಸುಮಾರು ೩.೫೦ ಲಕ್ಷ ಮತದಾರರಿರುವ ಕುಂಚಿಟಿಗ ಸಮುದಾಯವನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಅಖಿಲ ಕರ್ನಾಟಕ ಕುಂಚಿಟಿಗ ಸಮುದಾಯದ ಪ್ರತಿನಿಧಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.