ಸಾರಾಂಶ
ಕುಕನೂರು:
ಸೌಹಾರ್ದತೆ, ಸಾಮರಸ್ಯ ಮತ್ತು ಭಾವೈಕ್ಯತೆ ಅಂತಹ ಸಂಬಂಧ ಬೆಸೆಯುವಲ್ಲಿ ಮೊಹರಂ ಪ್ರಮುಖ ಪಾತ್ರ ವಹಿಸಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ತಾಲೂಕಿನ ಬಿನ್ನಾಳದಲ್ಲಿ ಜರುಗಿದ ಮೊಹರಂ ಸಾಂಸ್ಕೃತಿಕ ಸಂಭ್ರಮದಲ್ಲಿ ಸಂತ ಶಿಶುನಾಳ ಶಿವಯೋಗಿ ನಾಟಕ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂತ ಶಿಶುನಾಳ ಶರೀಫರ ಮತ್ತು ಗೋವಿಂದ ಭಟ್ಟರ ಗುರು ಶಿಷ್ಯ ಪರಂಪರೆಯು ವಿಶ್ವಕ್ಕೆ ಒಂದು ಸೌಹಾರ್ದತೆ , ಸಾಮರಸ್ಯ ಭಾವೈಕ್ಯತೆಗೆ ಮಾದರಿಯಾಗಿದೆ. ಯುವಕರು ಅವರ ಸೌಹಾರ್ದ ಮಾದರಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಜಾತಿ, ಧರ್ಮ ಸಂಕೋಲೆಗಳ ಆಚೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಗೌರವಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಭಾವೈಕ್ಯತೆ, ಸಾಮರಸ್ಯ, ಸೌಹಾರ್ದತೆಯ ಮೌಲ್ಯಯುತ ವಾತಾವರಣ ಸೃಷ್ಟಿಯಾಗಲು ಸಾಧ್ಯ ಎಂದರು.
ಪತ್ರಕರ್ತ ಜಗದೀಶ ಚಟ್ಟಿ ಮಾತನಾಡಿ, ಮೊಹರಂ ಸಾಂಸ್ಕೃತಿಕ ಸಂಭ್ರಮದಲ್ಲಿ ಪ್ರತಿವರ್ಷವು ವಿನೂತನ ಜಾನಪದ ಕಾರ್ಯಕ್ರಮಗಳ ಮೂಲಕ ವಿಶಿಷ್ಠ ಕಲಾ ಪರಂಪರೆ ಪೋಷಿಸಿಕೊಂಡು ಬಂದಿದೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ತಹಶೀಲ್ದಾರ್, ಗ್ರಾಪಂ ಸದಸ್ಯರಾದ ಚೆನ್ನಮ್ಮ ಮುತ್ತಾಳ, ಕಮಲಾಕ್ಷಿ ಕಂಬಳಿ, ಗೂರಪ್ಪ ಪಂತಾರ್, ಮಹಮ್ಮದಸಾಬ್ ವಾಲಿಕಾರ, ಸಿದ್ದಲಿಂಗಯ್ಯ ಹಿರೇಮಠ, ಚೆನ್ನಯ್ಯ ಹಿರೇಮಠ, ಮಲ್ಲಯ್ಯ ಪೂಜಾರಿ, ವೀರಭದ್ರಯ್ಯ ಮಠಪತಿ, ತೋಟಯ್ಯ ಹಿರೇಮಠ, ಮೊಹರಂ ಸಾಂಸ್ಕೃತಿಕ ಸಮಿತಿ ಪ್ರಮುಖರಾದ ಶಂಕ್ರಪ್ಪ ಕಂಬಳಿ ,ಶರಣಪ್ಪ ಹಾದಿಮನಿ, ದೇವಪ್ಪ ಮುತ್ತಾಳ, ಪತ್ರಪ್ಪ ಕಂಬಳಿ, ರಾಮಣ್ಣ ಹುಗ್ಗಣ್ಣವರ, ಈರಪ್ಪ ಕುರಿ ಇದ್ದರು.
ಮೊಹರಂ ಕತಲ್ ರಾತ್ರಿಯ ಸಾಂಸ್ಕೃತಿಕ ಸಂಭ್ರಮದ ನಿಮಿತ್ತ ನವಲಗುಂದದ ಪ್ರವೀಣ್ ಬಾಗಲಕೋಟೆ ಮತ್ತು ತಂಡದವರು ಸಂತ ಶಿಶುನಾಳ ಶರೀಫ ಶಿವಯೋಗಿ ನಾಟಕ ಪ್ರದರ್ಶಿಸಿದರು. ಈ ವೇಳೆ ಕಲಾರಂಗದ ಸಾಧಕರು ಮತ್ತು ಸೇವಕರನ್ನು ಸನ್ಮಾನಿಸಲಾಯಿತು. ಡಾ. ಜೀವನಸಾಬ್ ವಾಲಿಕಾರ ನಿರೂಪಿಸಿ, ವಂದಿಸಿದರು.