ಸಾರಾಂಶ
ಪ್ರತಿಭಾ ಪುರಸ್ಕಾರ । ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಗೌರವ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಪ್ರತಿಯೊಬ್ಬರ ಜೀವನದಲ್ಲಿ ಹಣ ಮುಖ್ಯವಲ್ಲ, ಬದಲಿಗೆ ಉತ್ತಮ ಶಿಕ್ಷಣ ಮುಖ್ಯವಾಗುತ್ತದೆ, ವಿದ್ಯೆ ಯಾರೂ ಕೂಡ ಕದಿಯಲಾಗದ ಸಂಪತ್ತಾಗಿದೆ ಎಂದು ಅಹಿಂದ್ ಮತ್ತು ಕುರುಬ ಸಮಾಜದ ಮುಖಂಡ ಬಿ.ಸಿದ್ದಪ್ಪ ಹೇಳಿದರು.
ಪಟ್ಟಣದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಇಂತಹ ಪ್ರತಿಭಾ ಪುರಸ್ಕಾರಗಳು ಬೆಳೆಯುವ ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ನೀಡಿದಂತಾಗುತ್ತದೆ ವಿದ್ಯಾರ್ಥಿಗಳು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಪೋಷಕರಿಗೆ, ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಹೆಸರು, ಕೀರ್ತಿ ತರುವಂತೆ ಶ್ರಮವಹಿಸಿ ಶಿಕ್ಷಣ ಮಾಡಿದಾಗ ಅವರು ಇಡೀ ಸಮಾಜಕ್ಕೆ ಆಸ್ತಿಯಾಗುತ್ತಾರೆ ಎಂದು ಹೇಳಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್. ಪಾಲಾಕ್ಷಪ್ಪ ಮಾತನಾಡಿ, ಯಾವ ಸಮಾಜಗಳು ಶಿಕ್ಷಣಕ್ಕೆ ಮಹತ್ವ ನೀಡಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತವೆಯೋ ಅಂತಹ ಸಮಾಜಗಳು ಹೆಚ್ಚು ಅಭಿವೃದ್ಧಿಯಾಗಿ ಇಡೀ ದೇಶದ ಆಸ್ತಿಯಾಗುತ್ತವೆ ಎಂದು ಹೇಳಿದರು.ಸಮಾಜದಲ್ಲಿ ಮಕ್ಕಳು ಸಾಧನೆ ಮಾಡಿದಾಗ ಅವುಗಳನ್ನುಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಜೀವನದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡುವಂತೆ ಪ್ರೇರೇಪಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ಇಂದಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ.ಯ 36 ಮತ್ತು ಪಿ.ಯು.ಸಿ. 15 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.ಹೊನ್ನಾಳಿ ಟವನ್ ಸಂಘದ ಕುರುಬ ಸಮಾಜದ ನೂತನ ಸದಸ್ಯರು, ಕುರುಬ ಸಮಾಜ ಮುಖಂಡರು, ಪುರಸಭೆ ಸದಸ್ಯರು ಹಾಗೂ ಯುವ ಅಧಿಕಾರಿ ಹರೀಶ್ ಅವರನ್ನು ಸನ್ಮಾನಿಸಲಾಯಿತು.
ಕುರುಬ ಸಮಾಜದ ಪ್ರಸ್ತುತ ಸಣ್ಣ ನಿರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಹರೀಶ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹೇಗೆ ಸಾಧನೆಗಳನ್ನು ಮಾಡಬೇಕು, ಶೈಕ್ಷಣಿಕ ಕ್ಷೇತ್ರದಲ್ಲಿನ ವಿವಿಧ ರೀತಿಯ ಅವಕಾಶಗಳು, ಕೋರ್ಸ್ಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.ಕುರುಬ ಸಮಾಜದ ಗೌರವಾಧ್ಯಕ್ಷ ದಿಡಗೂರು ಪಾಲಾಕ್ಷಪ್ಪ, ಮುಖಂಡರಾದ ಎಸ್. ಎಸ್. ಬೀರಪ್ಪ, ಸೌಮ್ಯ, ಬಾಬು ಹೋಬಳದಾರ್, ಹರಿಹರ ಪ್ರಾಂಶುಪಾಲ ಸಂತೋಷ ಕುಮಾರ್,ತಿಮ್ಮೇನಹಳ್ಳಿ ಹನುಮಂತಪ್ಪ ಮುಂತಾದವರು ಮಾತನಾಡಿದರು.
ಬಾವಿಮನೆ ರಾಜಪ್ಪ, ಚಂದ್ರಪ್ಪ, ಸಣ್ಣಸಿದ್ದಪ್ಪ, ದೇವಿಕುಮಾರ್, ನೆಲಹೊನ್ನೆ ಅಂಜಪ್ಪ, ಕುರುಬ ಸಮಾಜದ ಮುಖಂಡೆ ಪಂಕಜ ಅರುಣ್ ಕುಮಾರ್, ಸುಮಾ ಮಂಜುನಾಥ ಇಂಚರ,ನವೀನ್ ಇಂಚರ, ಪಿರ್ಗಿ ಹಳದಪ್ಪ,ಎಂ. ಸುರೇಶ್, ನಾಗರತ್ನಮ್ಮ, ಚನ್ನೇಶ್, ರಾಜು ಕಣಗಣ್ಣಾರ,ಮೂರ್ತ್ಯಪ್ಪ, ಸೇರಿ ಹಲವಾರು ಜನ ಕುರುಬ ಸಮಾಜದ ಮುಖಂಡರು ಇದ್ದರು.