ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್ಸಿಪಿ, ಟಿಎಸ್ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ ಕ್ರಿಯಾ ಯೋಜನೆಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಆದೇಶಿಸಿದ್ದಾರೆ.ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಕಡ್ಡಾಯ ಕ್ರಮದಿಂದ ಎಸ್ಪಿಪಿ, ಟಿಎಸ್ಪಿಗೆ ಬಿಗಿ ಚೌಕಟ್ಟು ಒದಗಿಸಿದಂತಾಗಿದೆ. ಈ ಸಂಬಂಧ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಬೆಂಗಳೂರಿನ ಐಎಸ್ಇಸಿ ( Institute for Social Economic Change) ಸಾಮಾಜಿಕ ಆರ್ಥಿಕ ಬದಲಾವಣೆಯ ಸಂಸ್ಥೆಯಿಂದ ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಿದ ಎಸ್ಪಿಪಿ ಹಾಗೂ ಟಿಎಸ್ಪಿ ಯೋಜನೆಗಳ ಪರಿಣಾಮಗಳ ಬಗ್ಗೆ ಮಾಲ್ಯಮಾಪನ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.ಎಸ್ಸಿಪಿ ಹಾಗೂ ಟಿಎಸ್ಪಿ ಅಧಿನಿಯಮ- 2013 ರ ಪ್ರಕಾರ ಯೋಜನೆಗಳ ಮೌಲ್ಯಮಾಪನ ಕಡ್ಡಾಯವಿರುವುದಿರಿಂದ ರಾಜ್ಯದ 13 ಜಿಲ್ಲೆಗಳ 39 ತಾಲೂಕುಗಳಲ್ಲಿ ಐಎಸ್ಇಸಿ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಸಭೆಯಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಭಾರಿ ನೀರಾವರಿ, ಸಣ್ಣ ನೀರಾವರಿ, ಸಹಕಾರ, ಸಣ್ಣ ಕೈಗಾರಿಕೆ, ಕೈಮಗ್ಗ ಮತ್ತು ಜವಳಿ, ಕೌಶಲಾಭಿವೃದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಗಳ ಪ್ರಗತಿ ಪರಿಶೀಲನೆ ಜತೆಗೆ ಯೋಜನೆ ಅನುಷ್ಠಾನದಲ್ಲಿನ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು.ಐಎಸ್ಇಸಿ ಸಂಸ್ಥೆಯ ವಿಷಯ ತಜ್ಞ ವಿಜಯೇಂದ್ರ ಬಾಬು ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಬ್ಯಾಂಕ್ ಸಾಲದೊಂದಿಗೆ ಎಸ್ಸಿ ಹಾಗೂ ಎಸ್ಟಿ ಫಲಾನುಭವಿಗಳಿಗೆ ನೀಡುವ ಸಬ್ಸಿಡಿ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಫಲಪ್ರಧವಾಗುತ್ತಿಲ್ಲ. ಫಲಾನುಭವಿ ವಂತಿಕೆ ಆಧಾರದಲ್ಲಿ ಮನೆ ನಿರ್ಮಾಣ ಯೋಜನೆ ನೀಡುವ ಅನುದಾನ ಮೊತ್ತ ಕಡಿಮೆ ಇರುವ ಕಾರಣ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಸತಿ ರಹಿತ ಎಸ್ಸಿ ಹಾಗೂ ಎಸ್ಟಿ ಜನರು ಮನೆ ನಿರ್ಮಾಣಕ್ಕೆ ಮುಂದೆ ಬರುತ್ತಿಲ್ಲ. ಮನೆ ನಿರ್ಮಾಣದ ಘಟಕ ವೆಚ್ಚವೂ ಹೆಚ್ಚಾಗಿದ್ದು ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ನೀಡುವ ಅನುದಾನ ಕಡಿಮೆಯಿದೆ ಎಂದರು. ಜಿಲ್ಲೆಯ ನಗರ ಪ್ರದೇಶದಲ್ಲಿ ಮನೆ ನಿರ್ಮಾಣದ ಗುರಿ ಶೇ. 50 ರಷ್ಟು ಸಾಧನೆಯಾಗಿಲ್ಲ. ಆರಂಭಗೊಂಡ ಮನೆ ನಿರ್ಮಾಣಗಳ ಪೈಕಿ ಶೇ.10 ರಷ್ಟು ಕೂಡ ಪೂರ್ಣಗೊಂಡಿಲ್ಲ. ಈ ಹಿನ್ನಲೆಯಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಅಡಿ ಮನೆ ನಿರ್ಮಾಣದ ಘಟಕ ವೆಚ್ಚ ಹೆಚ್ಚಳ ಅಥವಾ ಸಂಪೂರ್ಣ ಮನೆ ನಿರ್ಮಾಣದ ಅನುದಾನವನ್ನು ವಿವಿಧ ಯೋಜನೆಗಳ ಅಡಿ ಹೊಂದಾಣಿಕೆ ಮಾಡಲು ಸರ್ಕಾರ ಅನುಮತಿ ನೀಡುವಂತೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.ಐಎಸ್ಇಸಿ ಸಂಸ್ಥೆ ಎಲ್ಲಾ ಇಲಾಖೆ ಮುಖ್ಯಸ್ಥರಿಂದ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆ ಅನುಷ್ಠಾನದಲ್ಲಿ ತರಬೇಕಾದ ಮಾರ್ಪಾಡುಗಳ ಬಗ್ಗೆ ವರದಿ ಪಡೆದು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಐಎಸ್ಇಸಿ ಸಂಸ್ಥೆಯ ಯೋಜನಾ ನಿರ್ದೇಶಕ ಪ್ರೊ. ಮಾದೇಶ್ವರನ್ ಮತ್ತು ಪ್ರೊ. ಬಿ.ಪಿ.ವಾಣಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಡಿಯುಡಿಸಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪ್ರಭಾರಿ ಯೋಜನಾಧಿಕಾರಿ ಮಧು ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.