ಮುಂಗಾರು ಕೃಷಿ ಆಂದೋಲನ ಜಾಗೃತಿಯ ಸಂಕೇತ

| Published : Jun 17 2025, 12:30 AM IST

ಸಾರಾಂಶ

ದೊಡ್ಡಬಳ್ಳಾಪುರ: ಮುಂಗಾರು ಕೃಷಿ ಆಂದೋಲನವು ನಿರಂತರ ಜಾಗೃತಿಯ ಸಂಕೇತವಾಗಿದ್ದು, ಕೃಷಿ ನಿರಂತರ ಚಟುವಟಿಕೆಯಾಗಿರುವ ಕಾರಣ ಈ ಅಂದೋಲನವು ವರ್ಷಪೂರ್ತಿ ನಡೆಯುತ್ತಿರಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಸಿ. ನಾರಾಯಣಸ್ವಾಮಿ ತಿಳಿಸಿದರು.

ದೊಡ್ಡಬಳ್ಳಾಪುರ: ಮುಂಗಾರು ಕೃಷಿ ಆಂದೋಲನವು ನಿರಂತರ ಜಾಗೃತಿಯ ಸಂಕೇತವಾಗಿದ್ದು, ಕೃಷಿ ನಿರಂತರ ಚಟುವಟಿಕೆಯಾಗಿರುವ ಕಾರಣ ಈ ಅಂದೋಲನವು ವರ್ಷಪೂರ್ತಿ ನಡೆಯುತ್ತಿರಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಸಿ. ನಾರಾಯಣಸ್ವಾಮಿ ತಿಳಿಸಿದರು.

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಬೆಂಗಳೂರು ವಲಯ-11ರ ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಮತ್ತು ಮುಂಗಾರು ತಾಂತ್ರಿಕ ಆಂದೋಲನ ಉದ್ಘಾಟಿಸಿ ಮಾತನಾಡಿ, ದೇಶಾದ್ಯಂತ 713 ಕೇಂದ್ರಗಳ 16000 ವಿಜ್ಞಾನಿಗಳು 15 ದಿನಗಳ ಈ ಅಭಿಯಾನದಲ್ಲಿ ಪಾಲ್ಗೊಂಡು ರೈತರ ಮನೆ ಬಾಗಿಲಿಗೆ ಹೋಗಿ ನೇರವಾಗಿ ಅರಿವು ಮೂಡಿಸಿ, ಅವರ ಸಮಸ್ಯೆಗಳಿಗೆ ಸಲಹೆ ಸೂಚಿಸಿದ್ದಾರೆ ಎಂದು ವಿವರಿಸಿದರು.

ಬೆಂ.ಗ್ರಾ ಜಿಲ್ಲಾ ಕೃಷಿ ಇಲಾಖೆ ಉಪನಿರ್ದೇಶಕಿ ಎಂ.ಗಾಯತ್ರಿ ಮಾತನಾಡಿ, ರೈತರು ಮುಂಗಾರಿನ ಚಟುವಟಿಕೆಗಳು ಚುರುಕಾಗಿರುವುದರಿಂದ ನೂತನ ತಳಿಗಳ ಬಿತ್ತನೆ ಬೀಜಗಳು ಮತ್ತು ಕೃಷಿ ಪರಿಕರಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ರೈತರು ಉಪಯೋಗ ಪಡೆಯಬಹುದು. ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವ ಕಾರ್ಯಕ್ರಮ ಪ್ರಾರಂಭವಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಪಾವತಿಸಿ ನೋಂದಾಯಿಸಿಕೊಳ್ಳಲು ತಿಳಿಸಿದರು.

ಕೇಂದ್ರದ ಮುಖ್ಯಸ್ಥ ಡಾ.ಹನುಮಂತರಾಯ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗೊಡೆಗೊಂಡ ನೂತನ ತಳಿಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮತ್ತು ಅಭಿವೃದ್ಧಿ ಇಲಾಖೆಗಳ ವಿಸ್ತರಣಾಧಿಕಾರಿಗಳಿಗೆ ತಾಂತ್ರಿಕ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ್ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ವಾಡಿಕೆಗಿಂತ ಶೇ.105ರಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಪೂರ್ವ ಮುಂಗಾರಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ರೈತರು ಈ ನೀರಿನ ಸಂರಕ್ಷಣೆ ಮತ್ತು ಮಣ್ಣು ಆರೋಗ್ಯ ಮತ್ತು ಫಲವತ್ತತೆ ಕಾಪಾಡಿಕೊಳ್ಳಲು ಕೃಷಿ ಹೊಂಡ ಮತ್ತು ಇಂಗು ಗುಂಡಿಗಳ ಮೂಲಕ ಮಳೆ ನೀರನ್ನು ಸಂರಕ್ಷಿಸುವುದು, ಇಳಿಜಾರಿಗೆ ಅಡ್ಡಲಾಗಿ ಬೇಸಾಯ ಮಾಡುವ ತಾಂತ್ರಿಕತೆಗಳನ್ನು ರೈತರು ಅಳವಡಿಸಿಕೊಳ್ಳವುದರ ಜೊತೆಗೆ ತಮ್ಮ ಜಮೀನಿನ ಬದುಗಳಲ್ಲಿ ಹೆಚ್ಚು ಸಸಿಗಳನ್ನು ನೆಡಬೇಕಾಗಿ ತಿಳಿಸಿದರು.

ಕೃಷಿ ತಜ್ಞರಾದ ಡಾ. ಕೆ.ಮಧುಸೂದನ್, ಡಾ. ಮಹೇಶ್, ಡಾ. ಎಂ.ಜೆ.ಚಂದ್ರೇಗೌಡ, ಡಾ. ಕೃಶಾಲಿನಿ, ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ, ರೇಷ್ಮೆ ಇಲಾಖೆ ಉಪನಿರ್ದೇಶಕ ಲಕ್ಷ್ಮಣ್ಣ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯ, ಕೃಷಿ ಉದ್ಯಮಿ ಪದ್ಮಿನಿ ಗೌಡ, ಮಾಜಿ ಅಧ್ಯಕ್ಷ ಎಚ್.ಎ.ನಾಗರಾಜ್ ವಿವಿಧ ವಿಷಯಗಳ ಕುರಿತು ರೈತರಿಗೆ ಮಾಹಿತಿ ಒದಗಿಸಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಅಭಿವೃದ್ಧಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ವಿವಿಧ ಕಂಪನಿಗಳು, ಡ್ರೋನ್, ರೈತ ಉತ್ಪಾದಕರ ಕಂಪನಿ, ಪ್ರಗತಿಪರ ರೈತರು ವಸ್ತು ಪ್ರದರ್ಶನ ಪ್ರಸ್ತುತಪಡಿಸಿದರು. ಹಸು, ಕುರಿಗಳ ವಿವಿಧ ತಳಿಗಳ ಪ್ರದರ್ಶನವೂ ನಡೆಯಿತು.

(ಒಂದು ಫೋಟೋ ಮಾತ್ರ ಬಳಸಿ)

15ಕೆಡಿಬಿಪಿ4-

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಸಮಾರೋಪ ಸಮಾರಂಭ ನಡೆಯಿತು.