ಮುಂಗಾರು: ಅವಘಡ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಡಾ. ನಾಗರಾಜ ಎಲ್.

| Published : Jun 01 2025, 02:23 AM IST

ಮುಂಗಾರು: ಅವಘಡ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಡಾ. ನಾಗರಾಜ ಎಲ್.
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ, ಜಲ ಆಯೋಗ, ಜಿಲ್ಲಾಡಳಿತ ನೀಡುವ ಸಲಹೆ ಹಾಗೂ ಸೂಚನೆಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ತಿಳಿಸಿದ್ದಾರೆ.

ಹಾವೇರಿ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ ನೈಋತ್ಯ ಮುಂಗಾರು ಜೂ. 1ರಂದು ಪ್ರವೇಶಿಸಲಿದ್ದು, ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಜಿಲ್ಲೆಯ ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಬೇಕು ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ತಿಳಿಸಿದ್ದಾರೆ.

ಮುಂಗಾರು ಅವಧಿಯಲ್ಲಿ ನದಿ, ತೊರೆ, ಜಲಪಾತಗಳು ಮತ್ತು ಕೆರೆಕಟ್ಟೆಗಳ ಬಳಿ ಆಕಸ್ಮಿಕವಾಗಿ ಮತ್ತು ಅಜಾಗರೂಕತೆಗಳಿಂದಾಗಿ ಅಪಾಯಗಳು ಹೆಚ್ಚಾಗುತ್ತಿವೆ. ಆದ್ದರಿಂದ ಆಕಸ್ಮಿಕ ಮತ್ತು ಅಜಾಗರತೂಕತೆಯಿಂದ ಸಂಭವಿಸುವ ದುರಂತ ಜೀವಹಾನಿ ತಡೆಗಟ್ಟಲು ಸ್ಥಳೀಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಾರ್ವಜನಿಕರು ನದಿಗಳು, ಸರೋವರಗಳು, ಕೊಳಗಳು, ಕ್ವಾರಿಗಳು, ಕಾಲುವೆಗಳು, ತುಂಬಿ ಹರಿಯುವ ಚರಂಡಿಗಳು ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಬಳಿ ಈಜುವುದು, ಆಟವಾಡುವುದು ಮತ್ತು ಓಡಾಡುವುದನ್ನು ಮಾಡಬಾರದು. ವಿಶೇಷವಾಗಿ ಮಕ್ಕಳು ಹಾಗೂ ಯುವಕರು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಸೇತುವೆಗಳ ಮೇಲೆ ಸಂಚಾರ ಬೇಡ: ಅತಿವೃಷ್ಟಿಯಿಂದ ಮುಳಗಿರುವ ಸೇತುವೆ ಹಾಗೂ ಸೇತುವೆ ಮೇಲ್ಮಟ್ಟದಲ್ಲಿ ನೀರು ಹರಿಯುತ್ತಿದ್ದರೆ, ಅವುಗಳನ್ನು ದಾಟಲು ಪ್ರಯತ್ನಿಸಬಾರದು.

ಸಾರ್ವಜನಿಕರು ಪ್ರಕ್ಷುಬ್ದಗೊಂಡ ನದಿಗಳು, ಜಲಪಾತಗಳು ಅಥವಾ ಅಪಾಯ ಮಟ್ಟದಲ್ಲಿ ನೀರು ಹೆಚ್ಚಿರುವ ಸ್ಥಳಗಳ ಬಳಿ ಸೆಲ್ಫಿ ಅಥವಾ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಾರದು. ಇಂತಹ ಘಟನೆಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.

ಮಕ್ಕಳ ಮೇಲೆ ನಿಗಾ ಇರಲಿ: ವಿಶೇಷವಾಗಿ ಜಲಮೂಲಗಳು ಮತ್ತು ತಗ್ಗು ಪ್ರದೇಶ ಪ್ರವಾಹಪೀಡಿತ ಜನವಸತಿ ಪ್ರದೇಶಗಳಲ್ಲಿ ಮಕ್ಕಳು ಹೊರಗೆ ಹೋಗದಂತೆ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು.

ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಶಿಥಿಲಗೊಂಡ ಸೇತುವೆಗಳು, ಅದೃಶ್ಯ ತೆರೆದ ಮ್ಯಾನ್‌ಹೋಲ್‌ಗಳು, ಹಾನಿಗೊಂಡ ರಸ್ತೆಗಳು ಮತ್ತು ನೀರಿನ ಸೆಳೆತಗಳು ಗಂಭೀರ ಪ್ರಮಾಣದ ಅಪಾಯಗಳನ್ನು ಉಂಟುಮಾಡಬಹುದು. ಆದ್ದರಿಂದ ಸಾರ್ವಜನಿಕರು ಪ್ರವಾಹದ ನೀರಿನಲ್ಲಿ ಹಾಯುವುದು ಹಾಗೂ ವಾಹನ ಚಾಲನೆ ಮಾಡುವುದು ಮಾಡಬಾರದು.

ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ಥಾವರ, ರಚನೆಗಳ ಬಳಿ ನೀರಿನಿಂದ ಆವೃತಗೊಂಡ ಪ್ರದೇಶಗಳು, ಶಿಥಿಲಗೊಂಡ, ಮುರಿದುಬಿದ್ದ ವಿದ್ಯುತ್ ಕಂಬಗಳು, ವಿದ್ಯುತ್ ಉಪಕರಣಗಳನ್ನು ಮುಟ್ಟಬಾರದು ಹಾಗೂ ಅವುಗಳ ಸನಿಹಕ್ಕೆ ಹೋಗಬಾರದು. ಸಾರ್ವಜನಿಕರು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ ಜಲ ಆಯೋಗ, ಜಿಲ್ಲಾಡಳಿತ ನೀಡುವ ಸಲಹೆ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.