ಸಾರಾಂಶ
- ರವೀಂದ್ರನಾಥ ಬಡಾವಣೆ ಪಾರ್ಕ್ನಲ್ಲಿ ಶೆಡ್ಗೆ ಆಕ್ಷೇಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆಯ ಎಸ್.ಎ. ರವೀಂದ್ರನಾಥ ನಗರದಲ್ಲಿ ಅಕ್ರಮವಾಗಿ ನಿರ್ಮಿಸಿದ ಶೆಡ್ಗಳನ್ನು ನ್ಯಾಯಾಲಯ ಆದೇಶದ ಹೊರತಾಗಿಯೂ ತೆರವುಗೊಳಿಸದ ಜಿಲ್ಲಾಡಳಿತ ಇನ್ನೊಂದು ತಿಂಗಳಲ್ಲಿ ತೆರವುಗೊಳಿಸಬೇಕು ಎಂದು ಶ್ರೀ ಎಸ್.ಎ. ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ಗಡುವು ನೀಡಿದೆ.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ಎನ್.ಎಸ್. ಮಹೇಶ್ವರಪ್ಪ ಅವರು, ರವೀಂದ್ರನಾಥ ಬಡಾವಣೆಯ ರಿ.ಸ.ನಂ.57, 62ರಲ್ಲಿ ಮತ್ತು ಪಾರ್ಕ್ಗಾಗಿ ಮೀಸಲಿಟ್ಟಿದ್ದ 331ರಲ್ಲಿ ಅಕ್ರಮವಾಗಿ ಶೆಡ್ಗಳನ್ನು ನಿರ್ಮಿಸಲಾಗಿತ್ತು. ಅಕ್ರಮ ಶೆಡ್ಗಳ ತೆರವಿಗೆ ದಾವಣಗೆರೆ ಜೆಎಂಎಫ್ಸಿ ನ್ಯಾಯಾಲಯ ಡಿಕ್ರಿ ನೀಡಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ನ್ಯಾಯಾಲಯ ಆದೇಶ ಉಲ್ಲಂಘನೆ ಮಾಡುತ್ತ, ಅಕ್ರಮ ಶೆಡ್ ತೆರವು ಮಾಡಿಸಿಲ್ಲ ಎಂದರು.
ಜೆಎಂಎಫ್ಸಿ ನ್ಯಾಯಾಲಯದ ಡಿಕ್ರಿ ಒಳಗೊಂಡ ಸಮಗ್ರ ಮಾಹಿತಿಯನ್ನು ಕಂದಾಯ ಸಚಿವರ ಗಮನಕ್ಕೂ ತರಲಾಗಿತ್ತು. ಸೂಕ್ತ ಕ್ರಮ ಕೈಗೊಂಡು, ಅನುಪಾಲನಾ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯು ದಾವಣಗೆರೆ ಮಹಾನಗರ ಪಾಲಿಕೆ ಹಾಗೂ ತಾಲೂಕು ಆಡಳಿತ ಜಂಟಿ ಕಾರ್ಯಾಚರಣೆ ಕೈಗೊಳ್ಳಲು ಸೂಚಿಸಿತ್ತು. ಕ್ರಮ ಕೈಗೊಂಡ ಬಗ್ಗೆ ಅನುಪಾಲನಾ ವರದಿ ನೀಡುವಂತೆ ಇಲಾಖೆ ಪತ್ರ ಬರೆದು, 5 ವರ್ಷ ಕಳೆದರೂ ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ. ಇನ್ನೊಂದು ತಿಂಗಳಲ್ಲೇ ಅಕ್ರಮ ಶೆಡ್ಗಳನ್ನು ಜಿಲ್ಲಾಡಳಿತ ತೆರವು ಮಾಡಿಸಬೇಕು. ಇಲ್ಲವಾದರೆ ತೀವ್ರ ಹೋರಾಟದ ಜೊತೆಗೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದರು.ಮೂಲಸೌಲಭ್ಯ ನಿರ್ಲಕ್ಷ್ಯ:
2021-2022ನೇ ಸಾಲಿನಲ್ಲಿ ನಿರ್ಮಾಣವಾದ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಉದ್ಯಾನವನಕ್ಕೆ ಮೀಸಲಿಟ್ಟಿದ್ದ ಜಾಗದಲ್ಲೇ ಅಕ್ರಮ ಶೆಡ್ ಹಾಕಲಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ತಮಗೆ ಬೇಕಾದವರಿಗೆ ರಸ್ತೆ ಒಳಗೊಂಡಂತೆ ಇತರೆ ಮೂಲಸೌಲಭ್ಯ ಕಲ್ಪಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಮೂಲ ಸೌಲಭ್ಯಗಳನ್ನೂ ಕಲ್ಪಿಸಿಲ್ಲ ಎಂದರು.ಖಾಲಿ ನಿವೇಶನದಲ್ಲಿ ವಾಚನಾಲಯ, ಅಂಗನವಾಡಿ ಕೇಂದ್ರ ಸ್ಥಾಪಿಸುವಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಆದರೆ, ಮೀಸಲು ನಿವೇಶನಗಳನ್ನು ನಗರ ಆಶ್ರಯ ಸಮಿತಿ ಮುಖಾಂತರ ಅರ್ಹರಲ್ಲದ ಫಲಾನುಭವಿಗೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಸಮಿತಿ ಗೌರವಾಧ್ಯಕ್ಷ ಎಸ್.ಮಲ್ಲನಗೌಡ, ಅಧ್ಯಕ್ಷ ಎನ್.ಸಿದ್ದರಾಮಪ್ಪ, ಉಪಾಧ್ಯಕ್ಷ ಎಸ್.ಆರ್. ಸೋಮಶೇಖರಪ್ಪ, ಸಹ ಕಾರ್ಯದರ್ಶಿ ಬಿ.ಕರಿಬಸಪ್ಪ, ಬಿ.ಚಂದ್ರೇಗೌಡ, ಎನ್.ವೀರಭದ್ರಪ್ಪ ಇತರರು ಇದ್ದರು.- - -
ಬಾಕ್ಸ್ * ತ್ಯಾಜ್ಯ ವಿಲೇವಾರಿ ಘಟಕ ಬೇಡ ನಗರ ಪಾಲಿಕೆಯವರು ಈಗ ಖಾಲಿ ನಿವೇಶನದ ಸುತ್ತಲೂ ತಂತಿ ಬೇಲಿ ಹಾಕಿರುವುದು ನಾಗರೀಕರಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ. ಖಾಲಿ ಜಾಗದಲ್ಲಿದ್ದ ಉದ್ಯಾನವನ ಅಭಿವೃದ್ಧಿಪಡಿಸಲು ಪಾಲಿಕೆಗೆ ಮನವಿ ಮಾಡಿದ್ದೆವು. ಮನವಿ ನಿರ್ಲಕ್ಷಿಸಿದ ಅಧಿಕಾರಿಗಳು ಅಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಈ ಭಾಗದಲ್ಲಿ ವಿಲೇವಾರಿ ಘಟಕವನ್ನು ಸ್ಥಾಪಿಸುವುದಕ್ಕೆ ಮುಂದಾದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಸಮಿತಿಯ ಮಹೇಶ್ವರಪ್ಪ ಎಚ್ಚರಿಸಿದರು.- - -
-14ಕೆಡಿವಿಜಿ2:ದಾವಣಗೆರೆಯಲ್ಲಿ ಭಾನುವಾರ ಶ್ರೀ ಎಸ್.ಎ. ರವೀಂದ್ರನಾಥ ನಗರ ನಾಗರೀಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಎನ್.ಎಸ್. ಮಹೇಶ್ವರಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.