ಮೂಡುಬಿದಿರೆ: ತಮ್ಮ ಜೀವನದುದ್ದಕ್ಕೂ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ಪೋಷಿಸಿ, ಬೆಳೆಸಿ ಉಳಿಸಿದ್ದಲ್ಲದೆ ಸಸ್ಯ ಸಂಪತ್ತು ಮತ್ತು ಸಾವಯವ ತರಕಾರಿ ಬೆಳೆಸುವಿಕೆಗೆ ಆಗಾಧ ಪರಿಶ್ರಮ ಹಾಕಿ ತನ್ನದೇ ವಿಶಿಷ್ಟ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಿದವರು ಕೀರ್ತಿಶೇಷ ಅನಂತ ಭಟ್ಟರು. ಅವರ ಕಾಯಕ, ಹೆಸರು ಶಾಶ್ವತವಾಗಿ ಉಳಿದಿರುವುದಕ್ಕೆ ಆವರಿಂದ ಮಾರ್ಗದರ್ಶನ, ಜ್ಞಾನ ಗಳಿಸಿರುವ ಇಂದಿನ ಸಾವಯವ ಕೃಷಿ ಬಳಗದವರು ನಡೆಸುತ್ತಿರುವ ಅವರ ಸಂಸ್ಮರಣಾ ಕಾರ್ಯಕ್ರಮವೇ ಸಾಕ್ಷಿ ಎಂದು ಹಿರಿಯ ಸಹಕಾರಿ ಧುರೀಣ, ಪಡುಮಾರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ ದಯಾನಂದ ಪೈ ಹೇಳಿದರು. ಇಲ್ಲಿನ ಅಲಂಗಾರು ಜನತಾ ವಿವಿಧೋದ್ದೇಶ ಸಹಕಾರಿ ಸಂಘದ ವಠಾರದಲ್ಲಿ ಅಮೃತ ಸಾವಯವ ಮಳಿಗೆ ಮತ್ತು ಸಾವಯವ ಕೃಷಿಕರ ಬಳಗ ಮೂಡುಬಿದಿರೆ ಆಶ್ರಯದಲ್ಲಿ ನಡೆದ ಸ್ವರ್ಗೀಯ ಇರುವೈಲು ಅನಂತ ಭಟ್ಟರ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಗತಿಪರ ಸಾವಯವ ಕೃಷಿಕರಾದ ಪಡುಮಾರ್ನಾಡು ದಯಾನಂದ ಭಟ್, ಜಿನೇಂದ್ರ ಹೆಗ್ಡೆ, ಅಮೃತ ಸಾವಯವ ಮಳಿಗೆಯಲ್ಲಿ ಅಶೋಕ್ ಭಂಡಾರಿ, ಇರುವೈಲು ವೆಂಕಟರಮಣ ಭಟ್ ಮೂಡುಬಿದಿರೆಯ ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕರ್ ಅನಿಸಿಕೆ ವ್ಯಕ್ತಪಡಿಸಿದರು.

ಗೊ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಿವಿಧ ಔಷಧೀಯ ಸಸ್ಯಾಗಳಾದ ಪುನರ್ನವ, ಕಪ್ಪಲ್ ಶುಂಠಿ, ಶಂಖ ಪುಷ್ಪ, ಆನೆ ಸೋಗೆ ಮಜ್ಜಿಗೆ ಸೊಪ್ಪು, ಮಹಾರಸ ನಾಂದಿ, ಆರಾರೂಟು, ಕೃಷ್ಣ ತುಳಸಿ ಮುಂತಾದ 100ಕ್ಕೂ ಹೆಚ್ಚಿನ ಔಷಧೀಯ ಗಿಡಗಳ ಬಗ್ಗೆ ಸ್ವರ್ಗೀಯ ಇರುವೈಲು ಅನಂತ ಭಟ್ಟರ ಪುತ್ರ ವೆಂಕಟರಮಣ ಭಟ್ಟರು ಪರಿಚಯ ನೀಡಿದರು.

ನಂತರ ವಿವಿಧ ಔಷಧೀಯ ಸಸಿಗಳು, ತರಕಾರೀ ಬೀಜಗಳು, ಗೋಕ್ರಪಾಮೃತ ವಿತರಿಸಲಾಯಿತು. ಬೆಂಗಳೂರು ರವಿಶಂಕರ್ ಗುರೂಜಿಯವರ ಆರ್ಟ್ಸ್ ಆಫ್ ಲಿವಿಂಗ್ ಕೇಂದ್ರದ ಶಿಕ್ಷಕ ಉದಯ ಅವರು ಗೋ ಆಧಾರಿತ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

ಅಶೋಕ ಭಂಡಾರಿ ಸ್ವಾಗತಿಸಿದರು. ಪಡುಮಾರ್ನಾಡು ದಯಾನಂದ ಭಟ್ಟರು ನಿರ್ವಹಿಸಿದರು. ಪೆರಿಂಜೆಯ ಗೋಪಾಲಕೃಷ್ಣ ಭಟ್ ವಂದಿಸಿದರು.