ಸಾರಾಂಶ
ಗದಗ: ದೇಶದ ಗಡಿ ಕಾಯುವ ಹಾಗೂ ದೇಶವನ್ನು ಕಟ್ಟುವಲ್ಲಿ ಸೈನಿಕರ ಪಾತ್ರ ಶ್ಲಾಘನೀಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ನಗರದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ದೇಶದ ರಕ್ಷಣೆ ಮತ್ತು ಹಿತವನ್ನು ಕಾಪಾಡುವಲ್ಲಿ ಸೈನಿಕರು ಹಗಲಿರುಳು ತಮ್ಮ ಜೀವದ ಹಂಗು ತೊರೆದು ದಕ್ಷತೆಯಿಂದ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ನೈತಿಕ ಬಲ ಆತ್ಮಸ್ಥೈರ್ಯ ತುಂಬುವ ಮೂಲಕ ನಾವು ಸದಾಕಾಲ ಸೈನಿಕರ ಶ್ರೇಯೋಭಿವೃದ್ಧಿಯನ್ನು ಬಯಸಬೇಕು ಎಂದರು.ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಈ ಸೈನಿಕ ಸಮುದಾಯ ಭವನವನ್ನು ಹಾಗೂ ತರಬೇತಿ ಕೇಂದ್ರವನ್ನು ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ನಿರ್ಮಾಣಗೊಳಿಸಿದ್ದು ಅಭಿನಂದನೀಯ ಎಂದರು.ಸಂಘದ ಸರ್ವ ಸದಸ್ಯರು ಒಗ್ಗಟ್ಟಿನಿಂದ ಈ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯುವಕರನ್ನು ಇಲ್ಲಿ ಸೈನಿಕ ಭರ್ತಿಗೆ ತರಬೇತುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುವಂತಾಗಲಿ ಎಂದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪ್ರತಿಯೊಬ್ಬ ನಾಗರಿಕನೂ ಸೈನಿಕ, ರೈತ ಹಾಗೂ ಶಿಕ್ಷಕನನ್ನು ಮರೆಯುವಂತಿಲ್ಲ. ಸುಭದ್ರ ದೇಶವಾಗಿ ನಿರ್ಮಾಣಗೊಳ್ಳುವಲ್ಲಿ ಈ ಮೂವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ದೇಶಾಭಿಮಾನ ಹುಟ್ಟುವ ರೀತಿಯಲ್ಲಿ ಯುವ ಪಡೆಯನ್ನು ಸೈನ್ಯಕ್ಕೆ ಸೇರಲು ತರಬೇತಿ ಮಾರ್ಗದರ್ಶನ ನೀಡಲು ಸಂಘವು ಅಗತ್ಯ ಕ್ರಮ ಕೈಗೊಳ್ಳಲಿ ಎಂದರು.ನಿವೃತ್ತ ವಾಯು ಸೇನಾಧಿಕಾರಿ ಎರ್ ಕಮೋಡರ್ ಸಿ.ಎಸ್. ಹವಾಲ್ದಾರ ಮಾತನಾಡಿ, ಸಂಘದಲ್ಲಿ ಒಗ್ಗಟ್ಟು ಬಲಗೊಳ್ಳಬೇಕು. ಅಂದಾಗ ಮಾತ್ರ ಬೇಕು- ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು.ಮಾಜಿ ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಹಜವಾಗಿ ಮತ್ತು ಸಕಾಲಕ್ಕೆ ದೊರೆಯುತ್ತಿಲ್ಲ. ಆ ಕೆಲಸ ಆಗಬೇಕು. ಕೇವಲ ಮಾಜಿ ಸೈನಿಕರನ್ನು ಹಾಡಿ ಹೊಗಳಿದರೆ ಸಾಲದು. ಅವರಿಗೆ ಯೋಗ್ಯ ಸ್ಥಾನಮಾನಗಳು ಲಭ್ಯವಾಗಬೇಕು. ಮಾಜಿ ಸೈನಿಕರಿಗೆ ಶೇ. 10ರಷ್ಟು ಮೀಸಲಾತಿ ಇದ್ದು, ಅದು ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕು. ಮಾಜಿ ಸೈನಿಕರಿಗೂ ರಾಜಕಾರಣದಲ್ಲಿ ಎಂಎಲ್ಎ, ಎಂಎಲ್ಸಿ ಅಭ್ಯರ್ಥಿಯಾಗಲು ಅವಕಾಶ ದೊರೆಯಬೇಕು. ಅಂದಾಗ ಮಾತ್ರ ಮಾಜಿ ಸೈನಿಕರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ಬರಲಿರುವ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕೆಂದರು.ಈ ವೇಳೆ ಸಾನ್ನಿಧ್ಯವನ್ನು ಓಂಕಾರೇಶ್ವರ ಹಿರೇಮಠದ ಫಕೀರೇಶ್ವರ ಪಟ್ಟಾಧ್ಯಕ್ಷರು ವಹಿಸಿದ್ದರು. ಅರವಿಂದ ಶಿಗ್ಗಾಂವಿ, ಸುಧೀಂದ್ರ ಇಟ್ನಾಳ, ಟಿ.ಎಸ್. ಪಾಟೀಲ, ಬಸವರಾಜ ನಿಂಗನಗೌಡರ, ಶಿವಲೀಲಾ ಭಾವಿಕಟ್ಟಿ, ಅನುಸೂಯಾ ಬೆಟಗೇರಿ, ಕಿರಣಕುಮಾರ ಕೋಪರ್ಡೆ, ಶಾಂತವ್ವ ಭಜಂತ್ರಿ, ವಿದ್ಯಾ ಕೆ., ಜಿ.ಸಿ. ರೇಶ್ಮಿ, ಕೇಶವ ದೇವಾಂಗ, ಎಸ್.ಎಫ್. ಹೊನ್ನಪ್ಪನವರ, ಈರಣ್ಣ ತಳ್ಳಿಕೇರಿ, ಮಹೇಶ ಆಶಿ, ಮಹಮ್ಮದಹನೀಫ್ ಶೇಖಬಾಯಿ, ಬಿ.ವಿ. ಅಬ್ಬಿಗೇರಿ, ಎಚ್.ಬಿ. ಜಂಗಣ್ಣವರ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಬಾವಿಕಟ್ಟಿ, ಕೆ.ಎಸ್. ಹಿರೇಮಠ, ಎ.ಎಂ. ತಹಶೀಲ್ದಾರ, ರಘುನಾಥರೆಡ್ಡಿ ಶೆಟ್ರಡ್ಡಿ, ಬಿ.ಬಿ. ಅರವಡಗಿಮಠ, ಚನ್ನಯ್ಯ ಬಳಗಾನೂರಮಠ, ಎಸ್.ಎಸ್. ವಡ್ಡಿನ, ಬಸನಗೌಡ ಪಾಟೀಲ, ಎಸ್.ಎಂ. ಮಡಿವಾಳರ, ಮೀನಾಕ್ಷಿ ಬದಿ, ಶಂಕರಗೌಡ ಪಾಟೀಲ, ದ್ರಾಕ್ಷಾಯಣಿ ಲಕ್ಕುಂಡಿ ಇದ್ದರು. ಎಸ್.ಆರ್. ಪಾಟೀಲ ಸ್ವಾಗತಿಸಿದರು. ಸುಧೀರಸಿಂಹ ಘೋರ್ಪಡೆ ನಿರೂಪಿಸಿದರು. ಜಿ.ಬಿ. ಮಾಲಗಿತ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಜಿ. ಸೊನ್ನದ ವಂದಿಸಿದರು.
;Resize=(128,128))
;Resize=(128,128))