ಕನ್ನಡಪ್ರಭ ವಾರ್ತೆ ಅಫಜಲಪುರ
ಕರ್ಜಗಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಅಡುಗೆ ಮಾಡಲು ಬಳಕೆ ಮಾಡುವ ಆಹಾರ ಧಾನ್ಯಕ್ಕೆ ನುಸಿ ಹತ್ತಿದ್ದರೂ ಅದೇ ಆಹಾರ ಧಾನ್ಯ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಮನಿ ಹಾಗೂ ತಹಸೀಲ್ದಾರ್ ಸಂಜೀವಕುಮಾರ ದಾಸರ್ ಅವರು ವಸತಿ ಶಾಲೆಗೆ ಭೇಟಿ ನೀಡಿದ್ದ ವೇಳೆ ಸಾರ್ವಜನಿಕರು ಜಮಾಗೊಂಡು ವಸತಿ ಶಾಲೆಯಲ್ಲಿನ ಕಳಪೆ ಗುಣಮಟ್ಟದ ಮತ್ತು ನುಸಿ ಹತ್ತಿರುವ ಆಹಾರ ಧಾನ್ಯಗಳಿರುವ ದಾಸ್ತಾನು ಅಧಿಕಾರಿಗಳಿಗೆ ತೋರಿಸಿ ಕಿಡಿ ಕಾರಿದರು.
ಮುಖಂಡ ರಾಜು ಜಿಡ್ಡಗಿ ಮಾತನಾಡಿ, ಕರ್ಜಗಿ ವಸತಿ ಶಾಲೆಯಲ್ಲಿ ಯಾರೊಬ್ಬರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ವಾರ್ಡನ್, ಮುಖ್ಯಗುರು, ಶಿಕ್ಷಕರು ಸಮಯಾನುಸಾರ ಬರುತ್ತಿಲ್ಲ. ಅಡುಗೆಯವರು, ಸಹಾಯಕರು ಸಹ ಮನಸೋ ಇಚ್ಚೆ ಕೆಲಸ ಮಾಡುತ್ತಿದ್ದಾರೆ, ಬೇಜವಾಬ್ದಾರಿಯಿಂದಾಗಿ ಮಕ್ಕಳ ಹೊಟ್ಟೆಗೆ ವಿಷಾಹಾರ ಸೇರುವಂತಾಗಿದೆ. ಸ್ವಲ್ಪ ಮೈ ಮರೆತಿದ್ದರೂ ಮಕ್ಕಳ ಜೀವಕ್ಕೆ ಅಪಾಯವಿತ್ತು. ಸಂಬಂಧ ಪಟ್ಟವರು ಕೂಡಲೇ ಎಲ್ಲರನ್ನು ಅಮಾನತ್ತುಗೊಳಿಸಬೇಕು. ಇಲ್ಲವೇ ಬೇರೆಡೆ ವರ್ಗಾವಣೆ ಮಾಡಿ ಹೊಸ ಸಿಬ್ಬಂದಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಮಾತನಾಡಿ, ಮಕ್ಕಳ ವಿಷಾಹಾರ ಸೇವನೆ ಪ್ರಕರಣದಲ್ಲಿ ವಸತಿ ಶಾಲೆಯ ವಾರ್ಡನ್, ಮುಖ್ಯಗುರು, ಅಡುಗೆಯವರು ಸೇರಿದಂತೆ ತಾಲೂಕು ಆಡಳಿತ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಲ್ಲರ ಲೋಪ ಎದ್ದು ಕಾಣುತ್ತಿದೆ. ಸರ್ಕಾರಕ್ಕೆ ಮಕ್ಕಳ ಜೀವದ ಬಗ್ಗೆ ಕಾಳಜಿ ಇದ್ದರೆ ಎಲ್ಲರ ಮೇಲೂ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
