ಸಾರಾಂಶ
ಜಾಗೃತಿ ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾಧಿಕಾರಿ
ಕನ್ನಡಪ್ರಭ ವಾರ್ತೆ ಬಳ್ಳಾರಿಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚು ಬಾಲ್ಯವಿವಾಹ ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದ್ದು, ಸಮಾಜದಲ್ಲಿ ಬಾಲ್ಯವಿವಾಹ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಚನ್ನಬಸಪ್ಪ ಪಾಟೀಲ್ ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಕೇಂದ್ರ, ಪೋಲಿಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಕಂಟೋನ್ಮೆಂಟ್ ಪ್ರದೇಶದ ಗಾಲೀಬ್ ಪ್ರೌಢಶಾಲೆ (ಅನುದಾನಿತ)ಯಲ್ಲಿ ಆಯೋಜಿಸಿದ್ದ ಬಾಲ್ಯವಿವಾಹ, ಪೋಕ್ಸೋ ಕಾಯ್ದೆ ಮತ್ತು ಮೂಢನಂಬಿಕೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪೋಷಕರಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಿ, ಬಾಲ್ಯವಿವಾಹ ನೆರವೇರಿಸುತ್ತಿರುವ ವ್ಯಕ್ತಿಗಳಾದ ಪುರೋಹಿತರು, ಮೌಲಿಗಳು, ಚರ್ಚ್ ಪಾದ್ರಿಗಳು ಮತ್ತು ದೇವಸ್ಥಾನದ ಪೂಜಾರಿಗಳು, ಲಗ್ನ ಪತ್ರಿಕೆ ಮುದ್ರಣ ಮಾಡುವ ಪ್ರಿಟಿಂಗ್ ಪ್ರೆಸ್, ವಾದ್ಯವೃಂದದವರು, ಶಾಮಿಯಾನ ಸಪ್ಲೈಯರ್ಸ್ಗಳು, ಪೋಟೋಗ್ರಾಫರ್-ವಿಡಿಯೋಗ್ರಾಫರ್ ಸೇರಿದಂತೆ ಭಾಗಿಯಾದ ಇನ್ನಿತರೆ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮಕ್ಕಳ ರಕ್ಷಣಾ ಘಟಕದ ನಿಲೋಫಿಯಾ ಮಾತನಾಡಿ, ಮಕ್ಕಳಿಗೆ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸುತ್ತಾ ಬಾಲ್ಯವಿವಾಹಕ್ಕೆ ಒಳಪಟ್ಟ ಬಾಲಕಿಯರು ಅನುಭವಿಸುವ ಕಷ್ಟ, ಪೋಷಕರ ಮೇಲೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳು ಹಾಗೂ ಪೋಕ್ಸೋ ಕಾಯ್ದೆಯು ಬಾಲ್ಯವಿವಾಹ ನಡೆದ ನಂತರ ಬಾಲಗರ್ಭಿಣಿಯ ಪ್ರಕರಣಗಳಲ್ಲಿ ಅನ್ವಯ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.ಮಕ್ಕಳ ಸಹಾಯವಾಣಿ ಸಿಬ್ಬಂದಿ ಸುಶೀಲ, ಮಕ್ಕಳ ಸಹಾಯವಾಣಿ ಸಂಖ್ಯೆ 1098 ನ ಕಾರ್ಯವೈಖರಿ, ಸೇವೆಗಳು, ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಕುರಿತು ಮಾಹಿತಿ ನೀಡಿದರು.
ಸಿಆರ್ಪಿ ಶಾಹನವಾಜ್ ಮಾತನಾಡಿ, ಎಲ್ಲ ಮಕ್ಕಳು ಬಾಲ್ಯವಿವಾಹ ತಡೆಗೆ ಮುಂದಾಗಬೇಕು. ತಮ್ಮ ತಮ್ಮ ಪೋಷಕರಿಗೆ ಈ ಕುರಿತು ಅರಿವು ಮೂಡಿಸಬೇಕು. ಯಾವುದೇ ಭಯಪಡದೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಇಲ್ಲವೇ ಪೊಲೀಸ್ ಸೇವೆ-112 ಗೆ ಮಾಹಿತಿ ನೀಡುವ ಮೂಲಕ ನಮ್ಮ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತಗೊಳಿಸಬೇಕು ಎಂದು ಕರೆ ನೀಡಿದರು.ಪೊಲೀಸ್ ಇಲಾಖೆಯ ನವದುರ್ಗಿ ತಂಡದ ಪವಿತ್ರ ಮಾತನಾಡಿ, ಸೈಬರ್ ಕ್ರೈಂ ಮತ್ತು ಅಂತರ್ಜಾಲ ಸುರಕ್ಷತೆ ಕುರಿತು ತಿಳಿಸಿ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆಯ ಅವಶ್ಯಕತೆಯಿದ್ದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಲು ತಿಳಿಸಿದರು.
ಶಾಲೆಯ ಮುಖ್ಯಗುರು ನಜೀರ್ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.