ರಟ್ಟೀಹಳ್ಳಿ: ತಾಲೂಕಿನ ಹಿರೇಯಡಚಿ ಹಾಗೂ ಕ್ಯಾತನಕೇರಿ ಅಕ್ಕಪಕ್ಕದ ಗ್ರಾಮಸ್ಥರ ಮಧ್ಯ ದೇವಸ್ಥಾನ ವಿಚಾರವಾಗಿ ಗುರುವಾರ ಗುಂಪು ಘರ್ಷಣೆ, ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಜೆಸಿಬಿ ಸೇರಿದಂತೆ 10ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ.

ಇತಿಹಾಸ ಪ್ರಸಿದ್ಧ ಗುಡ್ಡದ ದುರ್ಗಮ್ಮ ದೇವಸ್ಥಾನ ವಿಚಾರವಾಗಿ ಅಕ್ಕ ಪಕ್ಕದ ಎರಡು ಗ್ರಾಮಸ್ಥರ ಮಧ್ಯ ಗುಂಪು ಘರ್ಷಣೆ ನಡೆದಿದೆ. ಮಾ. 9ರಿಂದ ಆರಂಭವಾಗುವ ದುರ್ಗಮ್ಮ ದೇವಿ ಜಾತ್ರೆ ಅಂಗವಾಗಿ ಹಾಗೂ ಎರಡು ಗ್ರಾಮಸ್ಥರ ಮಧ್ಯ ದೇವಸ್ಥಾನ ವಿಚಾರವಾಗಿ ಜಗಳ ಬೇಡವೆಂದು ಹಳೇ ದೇವಸ್ಥಾನದ ಪಕ್ಕದಲ್ಲೇ ಹಿರೇಯಡಚಿ ಗ್ರಾಮಸ್ಥರಿಂದ ನೂತನ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದರು. ಕ್ಯಾತನಕೇರಿ ಗ್ರಾಮಸ್ಥರು ದೇವಸ್ಥಾನ ನಿರ್ಮಾಣಕ್ಕೆ ಪರವಾನಗಿ ಇದೆಯಾ, ದೇವಸ್ಥಾನ ಪಕ್ಕದಲ್ಲೇ ಮತ್ತೊಂದು ದೇವಸ್ಥಾನ ನಿರ್ಮಾಣ ಮಾಡುವುದು ಬೇಡ. ನಿಮ್ಮ ಗ್ರಾಮದಲ್ಲೇ ದೇವಸ್ಥಾನ ನಿರ್ಮಾಣ ಮಾಡಿಕೊಳ್ಳಿ ಎಂದು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಜೆಸಿಬಿ ಸೇರಿದಂತೆ 10ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದು, ವಿಡಿಯೋ ಆಧಾರದ ಮೇಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.